ಉಡುಪಿ: ಉಡುಪಿ ಜಿಲ್ಲೆಯ ಪಡುವರಿ ಸೋಮೇಶ್ವರ ಬೀಚ್, ತ್ರಾಸಿ-ಮರವಂತೆ ಬೀಚ್, ಆಸರೆ ಬೀಚ್, ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪ, ಕಾಪು ಬೀಚ್ ಹಾಗೂ ಪಡುಬಿದ್ರಿ ಮುಖ್ಯ ಬೀಚ್ಗಳಲ್ಲಿ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲು ಉದ್ದೇಶಿಸಿದ್ದು, ಪ್ರವಾಸೋದ್ಯಮ ಇಲಾಖೆ ವತಿಯಿಂದ 20 ಜನರಿಗೆ ಜೀವ ರಕ್ಷಕ ತರಬೇತಿ ನೀಡಿ, ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು.
ತರಬೇತಿಯಲ್ಲಿ ಭಾಗವಹಿಸುವ ಮುಂಚಿತವಾಗಿ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 2 ರಂದು ನಡೆಯಲಿದ್ದು, ಸದರಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾದೊಂದಿಗೆ ಅಂದು ಬೆಳಗ್ಗೆ 9 ಗಂಟೆಗೆ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದ ಈಜುಕೊಳ ಇಲ್ಲಿ ಹಾಜರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ 6 ದಿನಗಳ ಕಾಲ ತರಬೇತಿ ಆಯೋಜಿಸಲಾಗುವುದು. ಮಾಸಿಕ ವೇತನ ರೂ. 14,958 ದೊಂದಿಗೆ ಪಿ.ಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸಲಾಗುವುದು.
ಕನಿಷ್ಟ 18 ರಿಂದ 40 ವರ್ಷ ವಯೋಮಿತಿಯೊಳಗಿನ, 1 ಕಿ.ಮೀ ಓಟ ಮತ್ತು 400 ಮೀ ಈಜಲು ಸಾಮರ್ಥ್ಯ ಹೊಂದಿರುವ ಹಾಗೂ ಯಾವುದೇ ಆರೋಗ್ಯ ಸಮಸ್ಯೆ ಹೊಂದಿರದ ಆಸಕ್ತರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ ಕೊಠಡಿ ಸಂಖ್ಯೆ 303 ಅಥವಾ ದೂ.ಸಂಖ್ಯೆ 0820-2574868 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
















