1,026 ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ

ಉಡುಪಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ 60 ವರ್ಷ ತುಂಬಿದ ಉಡುಪಿಯ ಹಿರಿಯ ದಸ್ತಾವೇಜು ಬರೆಹಗಾರ ರತ್ನಕುಮಾರ್ ಉಡುಪಿ ಜಿಲ್ಲೆಯ ಎಲ್ಲ 1,026 ಆಶಾ ಕಾರ್ಯಕರ್ತೆಯರಿಗೆ ಸೀರೆಗಳನ್ನು ಸಾಂಕೇತಿಕವಾಗಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಾತನಾಡಿ, ಕೊರೊನಾ ವಾರಿಯರ್ಸ್‌ಗಳನ್ನು ಬಾಯಿ ಮಾತಿನಲ್ಲಿ ಹೊಗಳುವುದಕ್ಕಿಂತ ಕಾರ್ಯರೂಪದಲ್ಲಿ ಹೊಗಳುವುದು ಮುಖ್ಯ. ಇಂತಹ ಆದರ್ಶಗಳನ್ನು ಕೇವಲ ಕೆಲವೇ ದಿನಗಳಿಗೆ ಮೀಸಲಿಡುವ ಬದಲು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದು ಮತ್ತು ನಾವು ಏನನ್ನು ಹೇಳುತ್ತೇವೋ ಅವುಗಳನ್ನು ಕಾರ್ಯರೂಪದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‍ಚಂದ್ರ ಸೂಡ, ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರಶಾಂತ ಭಟ್, ವೈದ್ಯಾಧಿಕಾರಿ ಡಾ. ಪ್ರೇಮಾನಂದ್ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಅಧಿಕಾರಿ ಹರಿಕೃಷ್ಣ ಶಿವತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ರತ್ನಕುಮಾರ್ ಪತ್ನಿ ಸುಜಾತಾ, ಅವನಿ, ಶಶಾಂಕ ಶಿವಾತ್ತಯ ಇದ್ದರು.