ಉಡುಪಿ:ಮತ ಎಣಿಕೆ: ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ

ಉಡುಪಿ: ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ 23 ರಂದು ಬ್ರಹ್ಮಗಿರಿಯ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ತನಕ ಸದ್ರಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ.

      ಬ್ರಹ್ಮಗಿರಿ ಜಂಕ್ಷನ್‍ನಿಂದ ಅಜ್ಜರಕಾಡು ಎಲ್.ಐ.ಸಿ ಕಚೇರಿವರೆಗೆ ಏಕಮುಖ ಸಂಚಾರ ವ್ಯವಸ್ಥೆಯನ್ನು ನಿಷೇಧಿಸಿ, ಮತ ಎಣಿಕೆ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ದ್ವಿಚಕ್ರ ಮತ್ತು ಲಘು ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಈ ರಸ್ತೆಯಲ್ಲಿ ಕಲ್ಪಿಸಲಾಗಿದೆ.

    ಅಜ್ಜರಕಾಡು ಟೌನ್‍ಹಾಲ್‍ನಿಂದ ಬ್ರಹ್ಮಗಿರಿ ಜಂಕ್ಷನ್‍ವರೆಗೆ ಇರುವ ಏಕಮುಖ ಸಂಚಾರದ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

     ಅಜ್ಜರಕಾಡು ಲಾಲ್ ಬಹದ್ದೂರ್ ಶಾಸ್ತ್ರಿ ರಸ್ತೆಯಿಂದ ಎಲ್.ಐ.ಸಿ ಕ್ರಾಸ್‍ವರೆಗೆ ಸಾರ್ವಜನಿಕರನ್ನು ಸೇರಿದಂತೆ ಯಾವುದೇ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಿ, ಈ ಮಾರ್ಗವಾಗಿ ಬರುವ ಮತ ಎಣಿಕೆ ಸಿಬ್ಬಂದಿ, ಏಜೆಂಟ್ ಅಭ್ಯರ್ಥಿಗಳಿಗೆ, ಮಾಧ್ಯಮದವರಿಗೆ, ಲಘು ಮೋಟಾರ್ ವಾಹನಗಳಿಗೆ ಸುದರ್ಶನ್ ಅಪಾರ್ಟ್‍ಮೆಂಟ್ ಹಾಗೂ ಅದರ ಎದುರಿನ ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಸೈಂಟ್ ಸಿಸಿಲಿಯ ಕಾನ್ವೆಂಟ್ ರಸ್ತೆ ಬ್ರಹ್ಮಗಿರಿ ಮಾರ್ಗವಾಗಿ ಜಗನಾಥ್ ನಾಯಕ್ ಕ್ರಾಸ್ ರಸ್ತೆವರೆಗೆ ಹೋಗುವ ಮತ್ತು ಬರುವ ಎಲ್ಲಾ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್ ನೀಡಲಾಗಿದ್ದು, ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ನಾಯಕ್ ಕ್ಯಾಂಟೀನ ಬಳಿಯ ಅಂಬೇಡ್ಕರ್ ರಸ್ತೆಯಿಂದ ವಿದ್ಯಾರಣ್ಯ ರಸ್ತೆಯವರೆಗೆ ಹೋಗುವ ಮತ್ತು ಬರುವ ಎಲ್ಲಾ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಿ, ಅಲ್ಲಿನ ನಿವಾಸಿಗಳಿಗೆ ಮಾತ್ರ ಪಾಸ್ ನೀಡಲಾಗಿದ್ದು, ಅವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

    ಬ್ರಹ್ಮಗಿರಿಯಿಂದ ಬಾಲಭವನದ ರಸ್ತೆ ಮುಖೇನ ವಿದ್ಯಾರಣ್ಯ ರಸ್ತೆ ಮೂಲಕ ಅಲಂಕಾರ್ ಥಿಯೇಟರ್ ರಸ್ತೆಯಿಂದಾಗಿ ಬಸ್ ಸ್ಟ್ಯಾಂಡ್‍ಗೆ ಸಂಪರ್ಕ ಕಲ್ಪಿಸಲಾಗಿದೆ.

     ಎಲ್.ಐ.ಸಿ ಜಂಕ್ಷನ್‍ನಿಂದ ಹರ್ಷ ಜಂಕ್ಷನ್ ಮೂಲಕ ಸಿಂಡಿಕೇಟ್ ಸರ್ಕಲ್‍ನಿಂದಾಗಿ ಬಸ್ ಸ್ಟ್ಯಾಂಡ್‍ಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.