ಉಡುಪಿ:ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಪಿಐಎಂ)ನಲ್ಲಿ ಆಫ್ರಿಕಾ ನೈರೋಬಿಯ ದಿ ಮ್ಯಾನೇಜ್ ಮೆಂಟ್ ಯುನಿವರ್ಸಿಟಿ ಆಫ್ ಆಫ್ರಿಕಾ (ಎಂಯುಎ) ಸಹಯೋಗದಲ್ಲಿ ವ್ಯವಸ್ಥಾಪನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪ್ರಗತಿಗಳು ವಿಷಯದ ಮೇಲೆ `ಇಂಡೋ – ಕೀನ್ಯಾ ಸಮ್ಮೇಳನ’ ಮೇ 10 ಮತ್ತು 11 ರಂದು ನಡೆಯಲಿದೆ.
ಮೇ 10ರಂದು ಸಮ್ಮೇಳನವನ್ನು ಪಿಐಎಂನ ಕಾರ್ಯದರ್ಶಿ ಡಾ.ಚಂದ್ರಶೇಖರ್ ಜಿ.ಸಿ. ಉದ್ಘಾಟಿಸುವರು. ಎಂಯುಎ ವಿವಿ ಕುಲಪತಿ ಡಾ.ವಾಷಿಂಗ್ಟನ್ ಒಕೆಯೋ ಉಪ ಕುಲಪತಿ ಡಾ.ಜಾನ್ ಚೆಲುಗಟ್,ಡೀನ್ ಡಾ.ಜಸ್ಟರ್ ನ್ಯಾಗ್, ಪಿಐಎಂ ಉಡುಪಿಯ ಪ್ರೊ.ಜೆ. ಸತಪಥಿ, ನಿಟ್ಟೆ ಮ್ಯಾನೇಜ್ ಮೆಂಟ್ ಶಾಲೆಯ ಡಾ.ಎಸ್.ಸಂಧ್ಯಾ, ಟ್ಯಾಪ್ಮಿ ಸಹ ಪ್ರಾಧ್ಯಾಪಕ ಡಾ.ನಂದನ್ ಪ್ರಭು, ಸಹ ಪ್ರಾಧ್ಯಾಪಕ ಡಾ.ರಾಮಕೃಷ್ಣ ಉಪಸ್ಥಿತರಿರುವರು.ಪಿಐಎಂ ನ ನಿರ್ದೇಶಕ ಡಾ.ಪಿ.ಎಸ್ ಐತಾಳ್ ಅಧ್ಯಕ್ಷತೆ ವಹಿಸುವರು.
ಇಂಡೋ-ಕೀನ್ಯ ಸಹಯೋಗ ಜಾಗತಿಕ ಶೈಕ್ಷಣಿಕ ಮತ್ತು ವ್ಯವಸ್ಥಾಪನಾ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಂತರ್ ವಿಷಯಕ ಸಂಶೋಧನೆಗೆ ಮುನ್ನುಡಿ ಬರೆಯಲಿದೆ.ಭಾರತ ಮತ್ತು ಕೀನ್ಯ ದೇಶಗಳ ಪ್ರಬುದ್ಧ ಅಕಾಡೆಮಿಶಿಯನ್ಗಳು, ಸಂಶೋಧಕರು ಮತ್ತು ತಂತ್ರಜ್ಞರಿಂದ ಸಂಶೋಧನಾ ಫಲಿತಾಂಶಗಳು, ದೃಷ್ಟಿಕೋನಗಳು ಮತ್ತು ಉತ್ತಮ ಅಭ್ಯಾಸ ಹಂಚಿಕೊಳ್ಳಲು ಈ ಸಮ್ಮೇಳನ ವೇದಿಕೆಯಾಗಲಿದೆ.
2006ರಲ್ಲಿ ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿಯ ಅಧೀನದಲ್ಲಿ ಸ್ಥಾಪಿತವಾದ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆ ಕಳೆದ 18 ವರ್ಷಗಳಲ್ಲಿ ವೃತ್ತಿಪರ ವ್ಯವಸ್ಥಾಪನ ಶಿಕ್ಷಣವನ್ನು ನೀಡುತ್ತಾ ಪ್ರತಿಭೆಗಳನ್ನು ಬೆಳೆಸಿದೆ. ಮಂಗಳೂರು ವಿವಿಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಪದೇ ಪದೇ ಶ್ರೇಷ್ಠತೆಯನ್ನು ಸಾಧಿಸುತ್ತಿದ್ದಾರೆ.
2011ರಲ್ಲಿ ಸ್ಥಾಪಿತವಾದ ದಿ ಮ್ಯಾನೇಜ್ಮೆಂಟ್ ಯುನಿವರ್ಸಿಟಿ ಆಫ್ ಆಫ್ರಿಕಾ (ಎಂಯುಎ) ನೈರೋಬಿ ಸಂಸ್ಥೆ ಪ್ರಖ್ಯಾತ ಶೈಕ್ಷಣಿಕ ಸಂಸ್ಥೆಯಾಗಿ ಆಫ್ರಿಕಾದಲ್ಲಿ ನೈತಿಕ ಆಡಳಿತ, ನಾಯಕತ್ವ ಹಾಗೂ ಉದ್ಯಮಶೀಲತೆಯ ಮೂಲಕ ಉದ್ಯಮಿ ನಾಯಕರನ್ನು ರೂಪಿಸುತ್ತಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ 2024ರ ಡಿಸೆಂಬರ್ನಲ್ಲಿ ನಡೆದಿದ್ದ ಸಮ್ಮೇಳನದ ಸಾರಾಂಶಗಳನ್ನೊಳಗೊಂಡ ಪುಸ್ತಕ ಹಾಗೂ ಸಮ್ಮೇಳನ ಕಾರ್ಯ ಸೂಚಿ ಬಿಡುಗಡೆ ನಂತರ ತಾಂತ್ರಿಕ ಪ್ರಬಂಧ ಮಂಡನೆ ನಡೆಯಲಿದೆ.
ಸಮ್ಮೇಳನದಲ್ಲಿ ಪೂರ್ಣಪ್ರಜ್ಞ ನ್ಯೂರೋ ಮ್ಯಾನೇಜ್ ಮೆಂಟ್ ಮತ್ತು ಮಾದರಿ ಶೀರ್ಷಕ ಮೆದುಳಿನ ಸಂಶೋಧನಾ ಕೇಂದ್ರದ ಉದ್ಘಾಟನೆ ನಡೆಯಲಿದೆ.
ಮೇ 11ರಂದು ನಡೆಯುವ ಸಮಾರೋಪದಲ್ಲಿ ಎಂಯುಎ ವಿವಿಯ ಕುಲಪತಿ ಡಾ.ಡಾ.ವಾಷಿಂಗ್ಟನ್ ಒಕೆಯೋ, ಪಿಐಎಂ ಖಜಾಂಚಿ ಸಿಎ ಪ್ರಶಾಂತ್ ಹೊಳ್ಳ, ಆಹ್ವಾನಿತ ಭಾಷಣಕಾರ ಪುತ್ತೂರು ವಿಸಿಇಟಿ ಬಿಸಿನೆಸ್ ಎಡ್ಮಿನಿಸ್ಟ್ರೇಷನ್ ವಿಭಾಗದ ಡಾ.ರಾಬಿನ್ ಮನೋಹರ ಶಿಂಧೆ ಉಪಸ್ಥಿತರಿರುವರು. ಪಿಐಎಂನ ನಿರ್ದೇಶಕ ಡಾ.ಪಿ.ಎಸ್.ಐತಾಳ್ ಅಧ್ಯಕ್ಷತೆ ವಹಿಸುವರು.












