ಉಡುಪಿ: ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿಯ ಉಡುಪಿ ಶಾಖೆಯ ವತಿಯಿಂದ ಈಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶ್ರವಣ ಎಸ್. ಪೂಜಾರಿ ಅವರ ಕುಟುಂಬಕ್ಕೆ ‘ವ್ಯಕ್ತಿಗತ ಅಪಘಾತ ವಿಮಾ ರಕ್ಷಣೆ’ಯಡಿ ರೂ. 15 ಲಕ್ಷ ಮೊತ್ತದ ಚೆಕ್ನ್ನು ಬುಧವಾರ ಹಸ್ತಾಂತರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮೃತ ಶ್ರವಣ ಅವರ ತಂದೆ ಕೆ. ಶ್ರೀನಿವಾಸ ಪೂಜಾರಿ, ವಿಮಾ ಪಾಲಿಸಿಯ ನಾಮಿನಿ ಆಗಿರುವ ತಾಯಿ ಎಸ್. ಅರುಣ ಅವರಿಗೆ ಚೆಕ್ ವಿತರಿಸಿದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾನೂನು ಘಟಕದ ಮುಖ್ಯಸ್ಥ ಎಂ. ಗೋಪಿಕೃಷ್ಣ ರಾವ್, ಶ್ರವಣ ಅವರು ತಮ್ಮ ಬೈಕ್ನ ವಿಮಾ ಪಾಲಿಸಿಯೊಡನೆ ವ್ಯಕ್ತಿಗತ ಅಪಘಾತ ವಿಮಾ ರಕ್ಷಣೆ ಪಾಲಿಸಿಯನ್ನು ಮಾಡಿಸಿಕೊಂಡಿದ್ದರು. ಅದರಂತೆ ಅವರ ಕುಟುಂಬಕ್ಕೆ ರೂ.15 ಲಕ್ಷ ಮೊತ್ತದ ವಿಮಾ ಪರಿಹಾರ ದೊರಕಿದೆ ಎಂದರು.
ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಗೋಪಾಲ್ ನಾಯ್ಕ್ ಮಾತನಾಡಿ, ಈ ಹಿಂದೆ ದ್ವಿಚಕ್ರ ವಾಹನ ಹಾಗೂ ಮೋಟಾರ್ ಕಾರುಗಳ ವಿಮಾಪಾಲಿಯಡಿ ಚಾಲಕ–ಮಾಲೀಕ- ಮರಣ ಹೊಂದಿದರೆ, ಆತನ ಕುಟುಂಬಕ್ಕೆ ವ್ಯಕ್ತಿತ ಅಪಘಾತ ವಿಮಾ ರಕ್ಷಣೆಯಲ್ಲಿ ಕೇವಲ ₨ 1ಲಕ್ಷ ಪರಿಹಾರ ಮಾತ್ರ ಸಿಗುತ್ತಿತ್ತು. ಆದರೆ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ 2018ರ ಸೆಪ್ಟೆಂಬರ್ ತಿಂಗಳಲ್ಲಿ ವ್ಯಕ್ತಿಗತ ಅಪಘಾತ ವಿಮಾ ಪಾಲಿಸಿಯ ಮೊತ್ತವನ್ನು ರೂ. 15ಲಕ್ಷಕ್ಕೆ ಏರಿಸಿ ಅನುಷ್ಠಾನಗೊಳಿಸಿದೆ ಎಂದರು.
ವಿಮಾ ಪರಿಹಾರದ ನಿಯಮಗಳೇನು?
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯು ಅಪಘಾತ ನಡೆದ ಸಂದರ್ಭದಲ್ಲಿ ವಾಹನ ಚಾಲಕ ಅಥವಾ ಮಾಲೀಕನಾಗಿರಬೇಕು. ವಾಹನ ಚಾಲನಾ ಪರವಾನಗಿ ಊರ್ಜಿತದಲ್ಲಿರಬೇಕು. ಈ ಅಂಶಗಳು ವಿಮಾ ಪರಿಹಾರ ಮೊತ್ತ ಪಡೆಯಲು ಪ್ರಮುಖವಾಗಿದೆ ಎಂದು ತಿಳಿಸಿದರು.
ವಾಹನ ವಿಮಾ ಪಾಲಿಸಿಯ ಜತೆಗೆ ವರ್ಷಕ್ಕೆ ರೂ. 360 ಹಣ ಪಾವತಿಸಿ ‘ವ್ಯಕ್ತಿಗತ ಅಪಘಾತ ವಿಮಾ ರಕ್ಷಣೆ’ ಪಾಲಿಸಿ ಮಾಡಿಸಿಕೊಳ್ಳಬಹುದು. ಪಾಲಿಸಿಯಲ್ಲಿ ನಾಮಿನಿಯ ಹೆಸರನ್ನು ದಾಖಲಿಸಿಕೊಳ್ಳುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಮಾತನಾಡಿ, ವಾಹನ ವಿಮಾ ಪಾಲಿಸಿಯಲ್ಲಿ ಮೃತ ವ್ಯಕ್ತಿಯ ವಯಸ್ಸು, ಆದಾಯ ಹಾಗೂ ಕುಟುಂಬದ ಅವಲಂಬನೆಯನ್ನು ಆಧಾರಿಸಿ ಕೋರ್ಟ್ ಪರಿಹಾರ ಮೊತ್ತವನ್ನು ಘೋಷಣೆ ಮಾಡುತ್ತದೆ. ಆದರೆ ವ್ಯಕ್ತಿಗತ ಅಪಘಾತ ವಿಮಾ ರಕ್ಷಣೆ ವಿಮಾ ಪಾಲಿಸಿಯಲ್ಲಿ ಪರಿಹಾರದ ಹಣ ಪಡೆಯಲು ಕೋರ್ಟ್ ಮೊರೆ ಹೋಗುವ ಅಗತ್ಯವಿಲ್ಲ. ಯಾವುದೇ ಷರತ್ತು ಇಲ್ಲದೆ ನೇರವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮೊತ್ತ ಸಿಗುತ್ತದೆ ಎಂದರು.












