ಉಚಿತ ಪರೀಕ್ಷಾಪೂರ್ವ ತರಬೇರಿ ಶಿಬಿರ ಉದ್ಘಾಟನೆ

ಉಡುಪಿ: ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆ ಟೈಮ್‌ ಸಂಸ್ಥೆಯ ಸಹಯೋಗದಲ್ಲಿ ಅಸಿಸ್ಟೆಂಟ್‌ ಹುದ್ದೆಯ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೈನ್‌ ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಡುಪಿಯ ಶಾಂಭವಿ ಹೋಟೆಲ್‌ನ ಅಪರ್ಣಾ ಸಭಾಂಗಣದಲ್ಲಿ ಆರಂಭಿಸಿರುವ ಉಚಿತ ಪರೀಕ್ಷಾಪೂರ್ವ ತರಬೇತಿ ಶಿಬಿರವನ್ನು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಮಾಜಿ ಕಾರ್ಯದರ್ಶಿ ಅದಮಾರು ಶ್ರೀಪತಿ ಆಚಾರ್ಯ ಭಾನುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶ್ರೀಪತಿ ಆಚಾರ್ಯ, ಈ ತರಬೇತಿ ಸಂಘದ ಸಾಮಾಜಿಕ ಕಳಕಳಿಯ ಭಾಗವಾಗಿದ್ದು, ಅಭ್ಯರ್ಥಿಗಳು ಇದರ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಟೈಮ್‌ ಸಂಸ್ಥೆಯ ವಿಭಾಗ ಮ್ಯಾನೇಜರ್‌ ಅಶ್ವಿನ್‌ರಾಜ್‌ ಮಾತನಾಡಿ, ಮುಂದಿನ ಪರೀಕ್ಷೆಯನ್ನು ಎದುರಿಸಲು ತಾವು ನೀಡುವ ತರಬೇತಿಯ ಜತೆಗೆ ಅಭ್ಯರ್ಥಿಗಳ ಕಠಿಣ ಪರಿಶ್ರಮ ಕೂಡ ಅಗತ್ಯ ಎಂದರು.
ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್‌, ಅಧ್ಯಕ್ಷ ಕೆ. ವಿಶ್ವನಾಥ ಪದಾಧಿಕಾರಿಗಳಾದ ಪದ್ಮರೇಖಾ ಸಿ. ಆಚಾರ್ಯ, ಎಸ್‌. ಕವಿತಾ ಉಪಸ್ಥಿತರಿದ್ದರು.