ಉಡುಪಿ: ಕಾರಿಗೆ ಬೆಂಕಿ ತಗುಲಿ ಅಪಾರ ನಷ್ಟ

ಉಡುಪಿ: ಇಲ್ಲಿನ ಗೀತಾಂಜಲಿ ಸಿಲ್ಕ್ ಬಟ್ಟೆ ಅಂಗಡಿ ಬಳಿ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರಿನ ಮುಂಭಾಗ ಸಂಪೂರ್ಣ ಸುಟ್ಟುಹೋದ ಘಟನೆ ಭಾನುವಾರ ಸಂಭವಿಸಿದೆ.

ಕಾರು ಕಳಸದ ವಿದ್ಯಾನಂದ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅವರು ಬಟ್ಟೆ ಖರೀದಿಸಲು ಕಳಸದಿಂದ ಇಲ್ಲಿಗೆ ಆಗಮಿಸಿದ್ದರು. ಬಟ್ಟೆ ಖರೀದಿಸಿ ಹೊರಡುವ ವೇಳೆ ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣವೇ ಏಕಾಏಕಿಯಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದ್ದು, ಸಾವಿರಾರು ರೂಪಾಯಿಗಳ ನಷ್ಟ ಸಂಭವಿಸಿದೆ.