ಉಡುಪಿ: ಮೀನುಗಾರರ ಸಂಘದ ಸದಸ್ಯರ ಹೊಸ ನೋಂದಣಿ- ನವೀಕರಣ ಪ್ರಕ್ರಿಯೆ ಆರಂಭ

ಉಡುಪಿ: ಪ್ರಸಕ್ತ ಸಾಲಿನ “ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ” ಮೀನುಗಾರರ ಕಲ್ಯಾಣ ಯೋಜನೆಯಾದ ಉಳಿತಾಯ ಮತ್ತು ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಮೀನುಗಾರರ ಸಹಕಾರ ಸಂಘಗಳು 2021-22ನೇ ಸಾಲಿಗೆ ಸದಸ್ಯರ ಹೊಸ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ.

ಸದರಿ ಯೋಜನೆಯಡಿ ಭಾಗವಹಿಸಲು ಇಚ್ಛಿಸುವ ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್ ದಾರರಾಗಿದ್ದು, 18 ರಿಂದ 60 ವರ್ಷ ವಯೋಮಾನದವರಾಗಿರಬೇಕು. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬಿ.ಪಿ.ಎಲ್ ಕಾರ್ಡ್ ಪ್ರತಿ ಹಾಗೂ ಸಂಘದಲ್ಲಿ ಸದಸ್ಯರಾಗಿರುವ ಬಗ್ಗೆ ದೃಢೀಕರಣ ಪತ್ರದೊಂದಿಗೆ ಸದಸ್ಯತನ ಹೊಂದಿದ ಸಹಕಾರ ಸಂಘದ ಮುಖಾಂತರ ತಮ್ಮ ವ್ಯಾಪ್ತಿಯ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಉಡುಪಿ/ಕುಂದಾಪುರ) ಇವರ ಕಚೇರಿಗೆ ಸೆಪ್ಟೆಂಬರ್ 30 ರೊಳಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ,ಉಡುಪಿ ಅವರ ಪ್ರಕಟಣೆ ತಿಳಿಸಿದೆ.