ಉಡುಪಿ: ತೀವ್ರ ಆಕ್ರೋಶದ ಬಳಿಕ ಬನ್ನಂಜೆಯಲ್ಲಿ ನಾರಾಯಣಗುರು ವೃತ್ತ ಮರುಸ್ಥಾಪನೆ.

ಉಡುಪಿ: ಉಡುಪಿ ನಗರಸಭೆಯಿಂದ ಅಧಿಕೃತವಾಗಿ ನಿರ್ಮಿಸಲಾಗಿದ್ದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಯಾವುದೇ ಮುನ್ಸೂಚನೆ ಇಲ್ಲದೆ ತೆರವುಗೊಳಿಸಿ ಪಾಳುಬಿದ್ದ ಜಾಗದಲ್ಲಿ ಎಸೆಯಲಾಗಿತ್ತು. ಈ ಬಗ್ಗೆ ವಿವಾದ ಭುಗಿಲೇಳುತ್ತಿದ್ದಂತೆ ಮತ್ತೆ ಅದೇ ಜಾಗದಲ್ಲಿ ಪೊಲೀಸ್ ಇಲಾಖೆ ನಾರಾಯಣಗುರು ವೃತ್ತವನ್ನು ಮರು‌ ಸ್ಥಾಪಿಸಿದೆ.
ಶನಿವಾರ ಬನ್ನಂಜೆಯಲ್ಲಿದ್ದ ನಾರಾಯಣಗುರು ವೃತ್ತವನ್ನು ಕಿತ್ತು ಹಾಕಿ, ಪಾಳು ಬಿದ್ದ ಜಾಗದ ಪೊದೆಗಳ ಮಧ್ಯೆ ಬಿಸಾಡಲಾಗಿತ್ತು. ಬಳಿಕ ವೃತ್ತವಿದ್ದ ಜಾಗದಲ್ಲಿ ಬ್ಯಾಂಕ್ ಆಫ್ ಬರೋಡ ನಾಮಫಲಕವನ್ನು ಹಾಕಲಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ, ಶಾಸಕರು, ಮಾಜಿ ಶಾಸಕರು, ಬಿಲ್ಲವ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದವು. ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ತಕ್ಷಣ ನಾರಾಯಣ ಗುರು ವೃತ್ತವನ್ನು ಪುನರ್‌ ಸ್ಥಾಪಿಸಿದೆ.