ಉಡುಪಿ: ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ

ಉಡುಪಿ: ಮೆಡಿಕಲ್ ಶಾಪ್ ವೊಂದರ ಮಾಲೀಕನ ಮೇಲೆ ಗ್ರಾಹಕರಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಉಡುಪಿ ಕೊಡಂಕೂರಿನಲ್ಲಿ ನಡೆದಿದೆ.

ಉಡುಪಿಯ ಕೊಡಂಕೂರಿನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿರುವ ಪುಷ್ಪರಾಜ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಇವರು ಸರ್ಕಾರದ ಆದೇಶದಂತೆ ಸೋಮವಾರ ರಾತ್ರಿ 8 ಗಂಟೆಗೆ ಮೆಡಿಕಲ್ ಬಂದ್ ಮಾಡಿ ಶೇಟರ್ ಹಾಕುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಗ್ರಾಹಕ ಹರೀಶ್ ಹಾಗೂ ಅವರ ಮಗ ಬಿಪಿ ಮಾತ್ರೆಯನ್ನು ಕೇಳಿದ್ದಾರೆ. ಆದರೆ ಶಾಪ್ ಮುಚ್ಚಲು ಹೊರಟ್ಟಿದ್ದ ಪುಷ್ಪರಾಜ್ ಶೆಟ್ಟಿ ನಾಳೆ ಬೆಳಿಗ್ಗೆ ಕೊಡುತ್ತೇನೆಂದು ತಿಳಿಸಿದ್ದಾರೆ.

ಆಗ ಹರೀಶ್ ಹಾಗೂ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದು, ತಂದೆ ಹಾಗೂ ಮಗ ಸೇರಿ ಪುಷ್ಪರಾಜ್ ಶೆಟ್ಟಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆಯಿಂದ ಪುಷ್ಪರಾಜ್ ಮುಖಕ್ಕೆ, ಕಣ್ಣಿನ ಕೆಳಗೆ ಗಾಯವಾಗಿದೆ. ಇಷ್ಟು ಮಾತ್ರವಲ್ಲದೆ ಆರೋಪಿಗಳು  ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.