ಮಂಗಳೂರು: ಅಂಗವಿಕಲರಿಗೆ ಅನುಕಂಪ ಬೇಡ, ಅವರಿಗೆ ಅವಕಾಶ ಬೇಕು.ಅವರು ಕೂಡ ದೇಶದ ಆಧಾರಸ್ತಂಭವಾಗುವ ಶಕ್ತಿ ಹೊಂದಿರುತ್ತಾರೆ ಎಂದು 2024ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ|ಕೆ. ಎಸ್. ರಾಜಣ್ಣ ಹೇಳಿದ್ದಾರೆ.
ಹಿರಿಯ ಸಮಾಜ ಸೇವಕ ದಿ| ಬಿ. ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮದಿನೋತ್ಸವ ಪ್ರಯುಕ್ತ ಶ್ರೀ ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ರವಿವಾರ ಜರಗಿದ ಸಮಾರಂಭದಲ್ಲಿ 2025 ನೇ ಸಾಲಿನ ‘ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ಹೆತ್ತವರು ಕೂಲಿ ಮಾಡಿ ಬದುಕುತ್ತಿದ್ದವರು. ನಾನು ಅಂಗವಿಕಲನಾಗಿದ್ದರೂ ನನ್ನನ್ನು ತಿಪ್ಪೆಯಲ್ಲಿ ಮಲಗಿಸಲಿಲ್ಲ. ನನ್ನ ಸ್ಥಿತಿಯ ಬಗ್ಗೆ ಅವರಿಗೆ ಆಘಾತಕ್ಕಿಂತ ಹೆಚ್ಚಾಗಿ ನನ್ನ ಭವಿಷ್ಯದ ಬಗ್ಗೆ ಕುತೂಹಲವಿತ್ತು. ನನ್ನನ್ನು ಪೋಷಿಸಿ ಶಿಕ್ಷಣ ನೀಡಿದರು. ಅವರು ವಿದ್ಯಾಭ್ಯಾಸ ನೀಡದೆ ಹೋಗುತ್ತಿದ್ದರೆ ನಾನು ಈ ಹಂತಕ್ಕೆ ಬೆಳೆಯಲು ಸಾಧ್ಯವಿರಲಿಲ್ಲ. ಅಂಗವಿಕಲ ಮಕ್ಕಳು ಹುಟ್ಟಿದರೆ ಅವರನ್ನು ನಿರ್ಲಕ್ಷಿಸದೆ ಪೋಷಣೆ ಮಾಡಿ ಶಿಕ್ಷಣ ಸಹಿತ ಹಕ್ಕುಗಳನ್ನು ನೀಡಿದರೆ ಅವರು ದೇಶದ ಆಧಾರಸ್ತಂಭವಾಗುತ್ತಾರೆ ಎಂದರು.
ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ, ದೈವಭಕ್ತಿ, ಗುರು ಧ್ಯಾನವನ್ನು ತಿಳಿಸಿಕೊಡುವುದು ಹೆತ್ತವರ ಕರ್ತವ್ಯ ಎಂದು ರಾಜಣ್ಣ ಹೇಳಿದರು
ಶ್ರೀ ಮಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಕಾಲಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಆಶೀರ್ವಚನ ನೀಡಿದರು. ಉದ್ಯಮಿ ಆನಂದ ಆಚಾರ್ಯ ಸಮಾರಂಭ ಉದ್ಘಾಟಿಸಿದರು.
ಟ್ರಸ್ಟ್ ನ ಅಧ್ಯಕ್ಷ ಎಸ್. ವಿ.ಆಚಾರ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತಾಧಿಕಾರಿ ಉಮೇಶ್ ಆಚಾರ್ಯ ಶುಭಾಂಸನೆ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಉದ್ಯಮಿ ಶಿವಾನಂದ ಬೈಕಾಡಿ, ಟಾಟಾ ಎಲೆಕ್ಟ್ರಾನಿಕ್ಸ್ ನ ಉಪಾಧ್ಯಕ್ಷ ಭರತ್ ಕುಮಾರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಡಾ| ಎಸ್. ಆರ್. ಹರೀಶ್ ಆಚಾರ್, ಶಿರ್ತಾಡಿ ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ ವಿಶ್ವಸ್ಥೆ ಲತಾ ಜನಾರ್ಧನ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.
ಎಸ್ ಕೆ ಜಿ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ಉಪೇಂದ್ರ ಆಚಾರ್ಯ ಅವರು ಬಿ.ಹರಿಶ್ಚಂದ್ರ ಆಚಾರ್ಯ ಸಂಸ್ಮರಣ ಭಾಷಣ ಮಾಡಿದರು.
ನಿಕಟ ಪೂರ್ವ ಅಧ್ಯಕ್ಷ ಪಿ. ಶಿವರಾಮ ಆಚಾರ್ಯ ಕಂಕನಾಡಿ ಮತ್ತು ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶಕುಂತಲಾ ಬಿ.ರಾವ್ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.
ಲೆಕ್ಕಪರಿಶೋಧಕ ಡಾ| ಸಿಎ ನಾಗರಾಜ್ ಆಚಾರ್, ಡಾ| ಕೆ. ಎಸ್. ರಾಜಣ್ಣ ಕುರಿತು ಕೆ ಎಸ್ ರಾಜಣ್ಣ ಕುರಿತು ಅಭಿನಂದನ ನುಡಿಗಳನ್ನಾಡಿದರು. ಉಪಾಧ್ಯಕ್ಷ ಪ್ರೊ.ಜಿ. ಯಶವಂತ ಆಚಾರ್ಯ ಉಪಸ್ಥಿತರಿದ್ದರು.ಕಾರ್ಯದರ್ಶಿ ಡಾ|ಎಸ್. ಪಿ. ಗುರುದಾಸ್ ಸ್ವಾಗತಿಸಿದರು. ವಿದ್ವಾನ್ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.
ಡಾ| ಕೆ.ಎಸ್. ರಾಜಣ್ಣ
ರಾಜಣ್ಣ ಅವರು ಬಾಲ್ಯದಲ್ಲೇ ಪೋಲಿಯೋ ಪೀಡಿತರಾಗಿದ್ದರೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದು ಉದ್ಯಮಿಯಾಗಿ ಬೆಳೆದು ಹಲವು ಅಂಗವಿಕಲರಿಗೆ ಉದ್ಯೋಗ ನೀಡಿ ಗಮನ ಸೆಳೆದಿದ್ದಾರೆ. 2002ರ ಪ್ಯಾರಾ ಒಲಿಂಪಿಕ್ಸ್ ನ ಡಿಸ್ಕಸ್ ತ್ರೋದಲ್ಲಿ ಚಿನ್ನದ ಪದಕ ಹಾಗೂ ಈಜು ಸರ್ಧೆಯಲ್ಲಿ ಬೆಳ್ಳಿ ಪದಕ ಪುರಸ್ಕೃತರಾಗಿದ್ದಾರೆ. ಅಂಗವಿಕಲರ ಕಲ್ಯಾಣಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.












