ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ- ಬಿಜೆಪಿ ಸದಸ್ಯರ ಆರೋಪ

ಉಡುಪಿ: ಉಸ್ತುವಾರಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಗಾಳಿಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಆದರೂ ಸಚಿವೆ ಹೆಬ್ಬಾಳ್ಕರ್ ಜಿಲ್ಲೆಗೆ ಆಗಮಿಸಿ ಜನರ ಸಮಸ್ಯೆಯನ್ನು ಆಲಿಸಿಲ್ಲ ಎಂಬ ಬಿಜೆಪಿ ಸದಸ್ಯರ ಆರೋಪವು ಇಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಮೊದಲು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವಿಜಯಲಕ್ಷ್ಮಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈವರೆಗೂ ನಗರಸಭೆಯ ಸದಸ್ಯರ ಮುಖವನ್ನೇ ನೋಡಿಲ್ಲ. ಇನ್ನೂ ನಮ್ಮ ಯಾವ ಸಮಸ್ಯೆ ಪರಿಹರಿಸುತ್ತಾರೆ. ಮಹಿಳೆಯರಿಗೆ ಧ್ವನಿಯಾಗಬೇಕಾದ ಸಚಿವರು ಜಿಲ್ಲೆಗೆ ಆಗಮಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಗಿರೀಶ್ ಅಂಚನ್, ಈ ಕಾಂಗ್ರೆಸ್ ಸರಕಾರಕ್ಕೆ ಕರೆಂಟ್ ಕೊಡುವ ಯೋಗ್ಯತೆ ಇಲ್ಲ. ಉಚಿತ ಯೋಜನೆ ನೀಡಿ ಸರಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಉಡುಪಿ ಜಿಲ್ಲೆಗೆ ಗ್ಯಾರಂಟಿ ಯೋಜನೆ ಬೇಡ ಎಂದಾದರೆ ನೀವು ಬರೆದುಕೊಡಿ. ನಿಮ್ಮ ಸರಕಾರ ಇರುವಾಗ ಬಡವರಿಗೆ ಸಹಾಯ ಮಾಡಲು ಯೋಗ್ಯತೆ ಇರಲಿಲ್ಲ‌. ಈಗ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಯೋಜನೆ ನೀಡುತ್ತಿರುವುದನ್ನು ನಿಮ್ಮಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಗುಡುಗಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ಮತ್ತೆ ಕೆಲಕಾಲ ಮಾತಿನ ಚಕಮಕಿ ಉಂಟಾಯಿತು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರತಿ ತಿಂಗಳು ಕೆಡಿಪಿ ಸಭೆ ಮಾಡಬೇಕೆಂಬ ಜವಾಬ್ದಾರಿ ಇದೆ. ಅನುಭವ, ಮಾಹಿತಿ ಕೊರತೆ ಇರುವವರ ಬಳಿ ಚರ್ಚಿಸಿ ಪ್ರಯೋಜನವಿಲ್ಲ. ಉಸ್ತುವಾರಿ ಸಚಿವರು ಯಾವಾಗ ಬರಬೇಕು. ಏನೆಲ್ಲ ಜವಾಬ್ದಾರಿ ನಿಭಾಯಿಸಬೇಕೆಂಬುವುದರ ಬಗ್ಗೆ ಕೆಡಿಪಿ ಸಭೆಯಲ್ಲಿ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ನೀವು ತಾಲೂಕು ಕೆಡಿಪಿ‌ ಸಭೆ ನಡೆಸಿ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಅತೀ ಹೆಚ್ಚು ಗ್ರಾಪಂಗಳು ಬರುವ ವಿಧಾನಸಭಾ ಕ್ಷೇತ್ರದ ಶಾಸಕರು ತಾಲೂಕು ಕೆಡಿಪಿ ಸಭೆ ನಡೆಸುವುದು. ಹೀಗಾಗಿ ಉಡುಪಿ ತಾಲೂಕಿನ ಸಭೆಯನ್ನು ಕಾಪು ಶಾಸಕರು ನಡೆಸುತ್ತಾರೆ ಎಂದು ತಿರುಗೇಟು ನೀಡಿದರು.