ಕಾರ್ಮಿಕರೂ ಸಹ ದೇಶದ ಬೆನ್ನೆಲುಬು: ದಿನಕರ ಬಾಬು

ಉಡುಪಿ ಮಾ1:  ರೈತರ ರೀತಿಯಲ್ಲಿ ಕಾರ್ಮಿಕರೂ ಸಹ ದೇಶದ ಬೆನ್ನೆಲುಬು ಇದ್ದಂತೆ, ದೇಶದ ಅಬಿವೃದ್ದಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಗಮನಾರ್ಹವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಅವರು ಭಾನುವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ, ಕಾರ್ಮಿಕ ಸಮ್ಮನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಮೂಲಕ ಅವರ ಶ್ರಮಕ್ಕೆ ಗೌರವ ನೀಡದಂತಾಗುದುರ ಜೊತೆಗೆ ಅವರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೆಪಣೆ ನೀಡಿದಂತಾಗುತ್ತದೆ, ಅಸಂಘಟಿತ ಕಾರ್ಮಿಕರಿಗೆ , ಸಂಘಟಿತ ಕಾರ್ಮಿಕರಿಗೆ ದೊರಕುವಂತಹ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ, ಸಂಬಂದಪಟ್ಟ ಎಲ್ಲಾ ಇಲಖೆಗಳು ಕಾರ್ಯೋನ್ಮುಖವಾಗಬೇಕು ಎಂದು ದಿನಕರ ಬಾಬು ಹೇಳಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಮತ್ತು ಇತರೆ ಸರಕಾರಿ ಸೌಲಭ್ಯಗಳು ದೊರೆಯಬೇಕು, ಅವರ ಅನಿಯಮಿತ ಕೆಲಸದ ವೇಳೆಯ ಬದಲು ನಿಗಧಿತ ಕೆಲಸದ ವೇಳೆ ನಿಗಧಿಪಡಿಸಿ, ಅವರ ಹಿತರಕ್ಷಣೆ ಮಾಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಅಸಂಘಟಿತ ಕಾರ್ಮಿಕರು ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಮೂಲಕ  ಅವರಿಗೆ ಅಗತ್ಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ, ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರ ನೊಂದಣಿಗೆ 2000 ಅರ್ಜಿಗಳು ಬಂದಿದ್ದು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ಮೂಲಕ  500 ಮಂದಿಗೆ ಸ್ಮಾರ್ಟ್ ಕಾರ್ಡ್ ಮಂಜೂರಾಗಿದ್ದು, ಉಳಿದವರಿಗೆ ಶೀಘ್ರದಲ್ಲಿ ಸ್ಮಾರ್ಟ್ ಕಾರ್ಡ್ ಮಂಜೂರಾಗಲಿದ್ದು, ಜಿಲ್ಲೆಯಲ್ಲಿನ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರನ್ನು ಸನ್ಮಾನಿಸಲಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಅಸಂಘಟಿತ ವಲಯದ, ಹಮಾಲಿ, ಗೃಹ ಕೆಲಸ, ಟೈಲರ್, ಮೆಕಾನಿಕ್, ಅಗಸರು, ಅಕ್ಕಸಾಲಿಗರು, ಕಮ್ಮಾರರು , ಕುಂಬಾರರು, ಕ್ಷೌರಿಕರು, ವಾಹನ ಚಾಲಕರು (ತ್ರಿಚಕ್ರ), ವಾಹನ ಚಾಲಕರು (ನಾಲ್ಕು ಚಕ್ರ)  ವರ್ಗಗಳ 11 ಮಂದಿಗೆ ಪ್ರಥಮ ಬಹುಮಾನವಾಗಿ 15000 ಮೌಲ್ಯದ ಚಿನ್ನದ ಪದಕ, 11 ಮಂದಿಗೆ ದ್ವಿತೀಯ ಬಹುಮಾನವಾಗಿ 10000 ಮೌಲ್ಯದ ಬೆಳ್ಳಿ ಪದಕ, 11 ಮಂದಿಗೆ ತೃತೀಯ ಬಹುಮಾನವಾಗಿ 8000 ಮೌಲ್ಯದ ಬೆಳ್ಳಿ ಪದಕ ಹಾಗೂ  ಎಲ್ಲಾ ವರ್ಗದ ಒಟ್ಟು 79 ಮಂದಿಗೆ ವಿಸೇಷ ಪುರಸ್ಕಾರವಾಗಿ ರೂ.1000 ನೀಡಿ ಗೌರವಿಸಲಾಯಿರು.

ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ಸ್ವಾಗತಿಸಿದರು, ಸತ್ಯನಾರಾಯಣ್ ವಂದಿಸಿದರು, ಪ್ರಶಾಂತ್ ಶೆಟ್ಟಿ ನಿರೂಪಿಸಿದರು.