ಉಡುಪಿ: ಕೃಷ್ಣಾಪುರ ಮಠದಿಂದ ಡಾ. ಶಶಿಕಿರಣ್ ಅವರಿಗೆ ‘ವೈದ್ಯವಾರಿಧಿ’ ಬಿರುದಿನೊಂದಿಗೆ ಸನ್ಮಾನ

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಕೃಷ್ಣಾಪುರ ಮಠದ ವತಿಯಿಂದ ರಾಜಾಂಗಣದ ಜನಾರ್ದನ ತೀರ್ಥ ವೇದಿಕೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕೋವಿಡ್ ಸಂದರ್ಭದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದ ಡಾ. ಶಶಿಕಿರಣ್ ಉಮಾಕಾಂತ್ ಅವರನ್ನು “ವೈದ್ಯವಾರಿಧಿ” ಎಂಬ ಬಿರುದಿನೊಂದಿಗೆ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಪರ್ಯಾಯೋತ್ಸವಕ್ಕೆ ದೇಣಿಗೆ ನೀಡಿ ವಿಶೇಷವಾಗಿ ಸಹಕರಿಸಿದ ಭಕ್ತಾಭಿಮಾನಿಗಳನ್ನು ಶ್ರೀಗಳು ಸನ್ಮಾನಿಸಿ, ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು.

ಸಮಿತಿಯ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಗೋಪಾಲಕೃಷ್ಣ ಉಪಾಧ್ಯಾಯರು ವಂದಿಸಿದರು.