ಉಡುಪಿ: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ಸರಾಸರಿ ಪ್ರತಿ ಯೂನಿಟ್ಗೆ 62 ಪೈಸೆ ದರ ಏರಿಕೆಗೆ ಮುಂದಾಗಿದ್ದು, ಇದಕ್ಕೆ ಭಾರತೀಯ ಕಿಸಾನ್ ಸಂಘ ಆಕ್ಷೇಪ ಸಲ್ಲಿಸಿದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.
ಸಂಘದಿಂದ ಸುಮಾರು 50 ಪ್ರಮುಖ ಪದಾಧಿಕಾರಿಗಳಿಂದ ಈಗಾಗಲೇ ದರ ಏರಿಕೆಗೆ ಆಕ್ಷೇಪವನ್ನು ಸಲ್ಲಿಸಲಾಗಿದೆ. ಇದೇ ತಿಂಗಳ 13ರಂದು ಮಂಗಳೂರಿನಲ್ಲಿ ನಡೆಯುವ ಸಾರ್ವಜನಿಕ ವಿಚಾರಣೆ ಸಂದರ್ಭದಲ್ಲಿ ಸಂಘದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿ ಮೆಸ್ಕಾಂನ ದರ ಏರಿಕೆ ಪ್ರಸ್ತಾಪವನ್ನು ಆಯೋಗ ತಿರಸ್ಕರಿಸುವಂತೆ ಮಾಡಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಕಳೆದ 7 ವರ್ಷಗಳಿಂದ ನಿರಂತರವಾಗಿ ಮೆಸ್ಕಾಂ ಲಾಭದಲ್ಲಿದೆ. ಆದರೂ ಪ್ರಸ್ತುತ ದರದಂತೆ ವಿದ್ಯುತ್ ಸರಬರಾಜನ್ನು ಮಾಡಿದರೆ 2020–21ಕ್ಕೆ ಸುಮಾರು 346.09 ಕೋಟಿ ನಷ್ಟವಾಗುತ್ತದೆ ಎಂಬ ಅಂದಾಜು ಲೆಕ್ಕಾಚಾರ ನೀಡಿದ್ದು, ಅದರಂತೆ ಎಲ್ಟಿ ವರ್ಗದ
ಗ್ರಾಹಕರಿಗೆ ಪ್ರತಿ ಕಿಲೋ ವ್ಯಾಟ್ಗೆ ನಿಗದಿತ ಶುಲ್ಕವನ್ನು 30ರಿಂದ 40 ರೂ.ಗೆ ಹಾಗೂ ಎಚ್ಟಿ ವರ್ಗದವರಿಗೆ 50ರಿಂದ 200 ರೂ.ಗೆ ಏರಿಸಲು ಪ್ರಸ್ತಾವನೆ ಸಲ್ಲಿಸಿದೆ.
ಅಲ್ಲದೆ, ಯೂನಿಟ್ ದರವನ್ನು ಎಲ್ಟಿ ಮತ್ತು ಎಚ್ಟಿ ವರ್ಗಕ್ಕೆ ಪ್ರತಿ ಯೂನಿಟ್ಗೆ 20 ರಿಂದ 57 ಪೈಸೆಯ ವರೆಗೆ ಏರಿಸಲು ಪ್ರಸ್ತಾಪ ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ.
ಮೆಸ್ಕಾಂನ ಅಡಿಟ್ ವರದಿಯಂತೆ 2019ರಲ್ಲಿ 56.39 ಕೋಟಿ ಲಾಭದಲ್ಲಿದ್ದು, ರಾಜ್ಯದಲ್ಲಿಯೇ ಅತಿ ಕಡಿಮೆ ಹಂಚಿಕೆ ನಷ್ಟವನ್ನು ಹೊಂದಿದೆ. ಆದರೂ ಮತ್ತೆ ದರ ಏರಿಕೆಯ ಪ್ರಸ್ತಾಪವನ್ನು ಸಲ್ಲಿಸಿದೆ.
ಮೆಸ್ಕಾಂಗೆ ಸರ್ಕಾರದ ಸಬ್ಸಿಡಿ ಹಾಗೂ ಇತರ ಕಂಪೆನಿಗಳ ಬಾಕಿ ಸೇರಿ 1 ಸಾವಿರ ಕೋಟಿಕ್ಕಿಂತಲೂ ಹೆಚ್ಚಿನ ಹಣ ಬರಲು ಬಾಕಿಯಿದೆ. ಗುಣಮಟ್ಟ ಹಾಗೂ ಗ್ರಾಹಕರ ಸೇವೆಯಲ್ಲಿ ಸುಧಾರಣೆ ಮಾಡದೇ ಪ್ರತಿ ವರ್ಷ ದರ ಏರಿಕೆ ಮಾಡುವ ಮೆಸ್ಕಾಂನ ಕ್ರಮ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುವಂತಾಗಿದೆ. ಹಾಗಾಗಿ ಈ ಎಲ್ಲಾ ವಿಚಾರವನ್ನು ಆಯೋಗದ ಮುಂದೆ ಪ್ರಸ್ತಾಪಿಸಿ ದರ ಇಳಿಕೆಗೆ ಆದೇಶ ನೀಡುವಂತೆ ಭಾಕಿಸಂ ಪ್ರಯತ್ನಿಸಲಿದೆ ಎಂದು ಉಡುಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.












