ಉಡುಪಿ: ಕೇರಳ ಸಮಾಜಂ ಉಡುಪಿ ಇದರ ಆಶ್ರಯದಲ್ಲಿ ಪ್ರಥಮ ವರ್ಷದ “ಓಣಂ ಸಂಭ್ರಮಾಚರಣೆ”ಯನ್ನು ಇದೇ ಸೆಪ್ಟೆಂಬರ್ 14ರ ಭಾನುವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಕೇರಳ ಸಮಾಜಂನ ಅಧ್ಯಕ್ಷ ಅರುಣ್ ಕುಮಾರ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ,ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆ ಸಂಸ್ಥೆಯ ಪ್ರೋಫೆಸರ್ ಡಾ. ಸಾಬೂ ಕೆ.ಎಂ., ಸುವರ್ಣ ,ಕರ್ನಾಟಕ ಕೇರಳ ಸಮಾಜಂ ಅಧ್ಯಕ್ಷ ರಾಜನ್ ಜಾಕೋಬ್, ಖ್ಯಾತ ಸಿನಿಮಾ ತಾರೆಯರಾದ ಹರೀಶ್ ಕನರನ್, ವಿವೇಕ್ ಗೋಪನ್, ಸೀಮಾ ಜಿ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಭಾಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 8.30ಕ್ಕೆ “ಪೂಕಳಂ ಸ್ಪರ್ಧೆ” ನಡೆಯಲಿದೆ. ಆ ಬಳಿಕ ಕೇರಳ ಸಮಾಜಂನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಓಣಂ ವಿಶೇಷ ಭೋಜನವನ್ನು ಕೇರಳದ ಕ್ಯಾಲಿಕಟ್ ನ ವಿನೋದ್ ಕುಮಾರ್ ತಂಡದವರು ಏರ್ಪಡಿಸಿದ್ದಾರೆ. ಭೋಜನದ ಬಳಿಕ ಮಧ್ಯಾಹ್ನ 2.30ಕ್ಕೆ ಕೇರಳದ ಸಿನಿಮಾ ಕಲಾವಿದರ ತಂಡದಿಂದ ವೈವಿಧ್ಯಮಯ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯಭರಿತ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5.30ಕ್ಕೆ ಜಯಕೇರಳ ಕಳರಿ ಸಂಘಮ್ ತಂಡದಿಂದ ಕಳರಿ ಪ್ರದರ್ಶನ ನಡೆಯಲಿದೆ. ಹಾಗೆಯೇ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹುಲಿ ವೇಷ ತಂಡದಿಂದ ಹುಲಿ ವೇಷ ಕುಣಿತ, ಕೇರಳ ಶೈಲಿಯ ಚಂಡೆ, ಓಣಂ ಹಬ್ಬಕ್ಕೆ ಬರುವ ಸಾಂಪ್ರದಾಯಿಕ ಮಾವೇಲಿ ಕಾರ್ಯಕ್ರಮ ವಿಶೇಷ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ಎಂದು ತಿಳಿಸಿದರು.
ಕೇರಳ ಸಮಾಜಂ ಉಡುಪಿ ಸಂಘಟನೆ ಉಡುಪಿಯಲ್ಲಿ ಕೆಲವೇ ತಿಂಗಳ ಹಿಂದೆ ಆರಂಭಗೊಂಡ ಸಂಘಟನೆಯಾಗಿದೆ. ಉಡುಪಿಯಲ್ಲಿ ನೆಲೆಸಿರುವ ಕೇರಳ ರಾಜ್ಯದ ಮಾಲಯಾಳಿಗರನ್ನು ಒಟ್ಟುಗೂಡಿಸಿ ಎಲ್ಲರನ್ನೂ ಸಂಘಟಿಸಿ ಕೇರಳ ಸಮಾಜಂನ ಒಂದೇ ವೇದಿಕೆಯಡಿಕೆಯಲ್ಲಿ ಒಗ್ಗೂಡಿಸುವುದರ ಮೂಲಕ ಉಡುಪಿಯಲ್ಲಿ ನೆಲೆ ನಿಂತಿರುವ ಕೇರಳಿಗರ ಧ್ವನಿಯಾಬೇಕು ಎನ್ನುವುದು ಸಂಘಟನೆಯ ಮೂಲ ಉದ್ದೇಶ. ಇತ್ತೀಚೆಗೆ ಉಡುಪಿಯ ಕುಂಜಿಬೆಟ್ಟುವಿನ ಐವೈಸಿ ಸಭಾಭವನದಲ್ಲಿ ಸಂಘಟನೆಯ ಉದ್ಘಾಟನೆ ಅದ್ಧೂರಿಯಾಗಿ ನಡೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಸ್. ವಸಂತ್ ಕುಮಾರ್, ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ರಮೇಶ್ ಈಪಿ, ಜೊತೆ ಕಾರ್ಯದರ್ಶಿ ಪ್ರದೀಪ್ ಜಿ, ಓಣಂ ಕಮಿಟಿ ಚೇರ್ ಮ್ಯಾನ್ ಪ್ರೊ. ಡಾ ಬಿ ಎಂ.ಜಾರ್ಜ್ ಉಪಸ್ಥಿತರಿದ್ದರು.












