ಉಡುಪಿ: ಉಡುಪಿ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ನ “31ನೇ ವಾರ್ಷಿಕೋತ್ಸವ” ಹಾಗೂ “ಓಣಂ ಸಂಭ್ರಮ-2025” ಕಾರ್ಯಕ್ರಮವನ್ನು ಇದೇ ಆಗಸ್ಟ್ 31ರ ಭಾನುವಾರ ಅಂಬಲಪಾಡಿಯ ಶಾಮಿಲಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಗುಣ ಕುಮಾರ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 8ಗಂಟೆಯಿಂದ 9ಗಂಟೆಯವರೆಗೆ ಹೂವಿನ ರಂಗೋಲಿ ಸ್ಪರ್ಧೆ, ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಸಾಂಸ್ಕೃತಿಕ ಸ್ಪರ್ಧೆಗಳು, ಮಧ್ಯಾಹ್ನ 12.30ರಿಂದ 2.30ರವರೆಗೆ ಕೆಸಿಎಸ್ ಸಿ ಕಲ್ಚರಲ್ ಬ್ಲಾಸ್ಟ್ ಹಾಗೂ ಮಧ್ಯಾಹ್ನ 2.30ರಿಂದ 4.30ರವರೆಗೆ ವಿಶೇಷ ಆಕರ್ಷಣೆಯಾಗಿ ಜನ ನಯನ (ತ್ರಿಶೂರ್) ತಂಡದಿಂದ “ಕೇರಳೀಯ ವೈಭವಂ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದರು.
ಬೆಳಿಗ್ಗೆ 11ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಖ್ಯಾತ ಮಲಯಾಳಂ ಚಲನಚಿತ್ರ ನಟ ಹಾಗೂ ಕೊಲ್ಲಂ ವಿಧಾನಸಭಾ ಕ್ಷೇತ್ರದ ಶಾಸಕ ಮುಕೇಶ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಜಿಲ್ಲಾಧಿಕಾರಿ ಸ್ವರೂಪಾ ಟಿಕೆ, ಎಸ್ಪಿ ಹರಿರಾಮ್ ಶಂಕರ್, ಮಾಹೆ ಪ್ರಸನ್ನ ಪಬ್ಲಿಕ್ ಹೆಲ್ತ್ ಸ್ಕೂಲ್ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ. ಎ. ಗಿರಿಜ (ಆರೋಗ್ಯ ಸೇವೆ, ಹಾಜಿ ಕೆ. ಅಬ್ದುಲ್ಲ ಕುಂಜಿ (ವ್ಯಾಪಾರ), ಈಶ್ವರ್ ಮಲ್ಪೆ (ಸಮಾಜ ಸೇವೆ), ವಲ್ಸಾ ಜಾರ್ಜ್ (ಕೃಷಿ) ಹಾಗೂ ಕ್ಯಾಪ್ಟನ್ ವೇಣುಗೋಪಾಲನ್ ನಾಯರ್ (ರಕ್ಷಣಾ ಸೇವೆ) ಅವರಿಗೆ ಕೆಸಿಎಸ್ ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಓಣಂ ಸಂಭ್ರಮ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್, ಕೆಸಿಎಸ್ ಸಿ ಕಾರ್ಯದರ್ಶಿ ಬಿನೇಶ್ ವಿ.ಸಿ., ಉಪಾಧ್ಯಕ್ಷರಾದ ಸಂತೋಷ್ ಕುಮಾರ್, ಗಣೇಶ್ ವಕೇರಿ, ತೇಜಸ್ವಿನಿ ಮಹಿಳಾ ವಿಭಾಗದ ಅಧ್ಯಕ್ಷೆ ಶೈನಿ ಸತ್ಯಭಾಮ, ಸಮಿತಿ ಸದಸ್ಯ ಮನೋಜ್ ಕಡಬ ಉಪಸ್ಥಿತರಿದ್ದರು.












