ಉಡುಪಿ: ಅಗ್ನಿ ದುರಂತದಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು

ಉಡುಪಿ: ಬಹಳಷ್ಟು ಕಂಬಳ ಕರೆಗಳಲ್ಲಿ ಓಡಿ, ಪ್ರಶಸ್ತಿಗೆ ಕೊರಳೊಡ್ಡಿದ್ದ ಕೋಣಗಳೆರಡು ಅಗ್ನಿ ಅವಘಡದಲ್ಲಿ ಅಸುನೀಗಿವೆ. ಕಾರ್ಕಳ ತಾಲೂಕಿನ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರಿಗೆ ಸೇರಿದ ಅಪ್ಪು ಮತ್ತು ತೋನ್ಸೆ ಎಂಬ ಕಂಬಳದ ಮುತ್ತುಗಳು ಇನ್ನಿಲ್ಲ ಎಂಬುವುದೇ ಬೇಸರ ಸಂಗತಿ.
ಶನಿವಾರ ರಾತ್ರಿ ಅಶೋಕ್ ಶೆಟ್ಟಿ ಅವರ ಹಟ್ಟಿಯಲ್ಲಿ ಸಂಭವಿಸಿದ ಅಗ್ನಿ‌ ಅವಘಡದಲ್ಲಿ ಸಾವನ್ನಪ್ಪಿದ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳ ಅಂತಿಮ‌ ಸಂಸ್ಕಾರ ನಡೆಯಿತು. ಅಶೋಕ್ ಶೆಟ್ಟಿ‌ ಅವರ ಗದ್ದೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮಕ್ಕಳಂತೆ ಸಾಕಿದ್ದ ಕೋಣಗಳನ್ನು ಕಳೆದುಕೊಂಡ ಅಶೋಕ್ ಶೆಟ್ಟಿ ಅವರು‌ ಅಂತಿಮ ವಿಧಿ ವಿಧಾನದ ವೇಳೆ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತರು. ಇದು ನೆರೆದಿದ್ದ ನೂರಾರು ಮಂದಿಯ ಕಣ್ಣನ್ನು ಒದ್ದೆಯಾಗಿಸಿತು.

ತೋನ್ಸೆ-ಅಪ್ಪುವಿನ ಸಾಧನೆ ಅಪಾರ:

ಅಪ್ಪು ಮತ್ತು ತೋನ್ಸೆ ಕೋಣಗಳು 2022-23 ಋತುವಿನ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಅದರಲ್ಲೂ ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದೆ.

ಸುಮಾರು 14-15 ವರ್ಷಗಳಿಂದ ತೋನ್ಸೆಯಿಂದ ಅಲೆವೂರು ತೆಂಕುಮನೆ ರಾಘು ಶೆಟ್ಟಿ ಅವರು ಕುಟ್ಟಿ ಎಂಬ ಕೋಣವನ್ನು ತಂದಿದ್ದರು. ಅದು ಮುಂದೆ ತೋನ್ಸೆ ಕುಟ್ಟಿ ಎಂದೇ ಹೆಸರು ಪಡೆಯಿತು. ಅಲೆವೂರು ರಾಘು ಶೆಟ್ರ ಯಜಮಾನಿಕೆಯಲ್ಲಿ ತಡಂಬೈಲು ಕುಟ್ಟಿ ಜತೆ ಜೂನಿಯ‌ರ್ ವಿಭಾಗದಲ್ಲಿ ಎರಡು ಬಾರಿ ಚಾಂಪಿಯನ್ ಶಿಪ್, ಹಿರಿಯ ವಿಭಾಗದಲ್ಲಿ ಎರಡು ವರ್ಷ ಚಾಂಪಿಯನ್‌ಶಿಪ್ ಪಡೆದ ಸಾಧನೆ ತೋನ್ಸೆ ಕೋಣದ್ದು.
ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರು ಓಡಿಸಿ ಮೆಡಲ್‌ ಪಡೆದಿದ್ದರು. ಬಳಿಕ ಬೇಲಾಡಿಗೆ ಬಂದ ತೋನ್ಸೆ ಅಡ್ಡ ಹಲಗೆ, ಕನಹಲಗೆ ವಿಭಾಗದಲ್ಲಿ ಕಳೆದ ನಾಲೈದು ವರ್ಷಗಳಲ್ಲಿ ಹಲವಾರು ಮೆಡಲ್ ಪಡೆದಿದೆ.

2022-23 ಸೀಸನ್ ನಲ್ಲಿ ಚಾಂಪಿಯನ್ ಪಟ್ಟ ಪಡೆದ ತೋನ್ಸೆ ಕಳೆದ ಸೀಸನ್ ನಲ್ಲಿ ಒಂದು ಮೆಡಲ್‌ ಪಡೆದಿತ್ತು.
ಮತ್ತೊಂದು ಕೋಣ ಅಪ್ಪು ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದಲ್ಲಿ ಸಾಧನೆ ಮಾಡಿದ ಕೋಣ. ತಡಂಬೈಲಿನಿಂದ ತಂದ ಕೋಣ ಬಳಿಕ ನಾರಾವಿ ಯುವರಾಜ್ ಜೈನ್ ಮತ್ತು ಬೇಲಾಡಿ ಮನೆಯ ಹೆಸರಿನಲ್ಲಿ ಹಲವು ಪ್ರಶಸ್ತಿ ಪಡೆದಿತ್ತು.