ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗರಿಗೆ ಮಾತ್ರ ಬೇರೆ ರಾಜ್ಯಗಳಿಗೆ ತೆರಳಲು ಅವಕಾಶ: ಉಡುಪಿ ಜಿಲ್ಲಾಧಿಕಾರಿ

ಉಡುಪಿ: ರಾಜ್ಯ ಸರ್ಕಾರ ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರಿಗೆ ಮಾತ್ರ ಅವರವರ ರಾಜ್ಯಗಳಿಗೆ ತೆರಳಲು ಅವಕಾಶ ಕಲಿಸಿದ್ದು, ಇನ್ಯಾರಿಗೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಲು ಅವಕಾಶವಿಲ್ಲ. ಹಾಗಾಗಿ ಯಾರು ಪಾಸ್ ಗಾಗಿ ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಬರಬಾರದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಆರೋಗ್ಯ ಸಮಸ್ಯೆ ಇರುವವರಿಗೆ ಬೇರೆ ರಾಜ್ಯಗಳಿಗೆ ತೆರಳಲು ತಾಲ್ಲೂಕು ಕಚೇರಿ ಮೂಲಕ ಮಂಜೂರು ಮಾಡಲಾಗುವ ಪಾಸ್ ಪಡೆಯಬೇಕು. ಲಾಕ್ ಡೌನ್ ಮೇ 17 ರ ವರೆಗೆ ಮುಂದುವರಿಯುವುದರಿಂದ ಯಾರಿಗೂ ಕೂಡ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊರರಾಜ್ಯಕ್ಕೆ ಹೋಗುವ ಕೂಲಿ ಕಾರ್ಮಿಕರು ಹಾಗೂ ಪ್ರವಾಸಿಗರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೆ ಬೇರೆ ರಾಜ್ಯಗಳಿಂದ ಕರ್ನಾಟಕ ರಾಜ್ಯಕ್ಕೆ ಬರಲು ಇಚ್ಛಿಸುವವರು ಸಹ ಅದೇ ರೀತಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಹಾಕಿದ ನಂತರ ರಾಜ್ಯ ಸರ್ಕಾರ ಸಂಬಂಧಿಸಿದ ರಾಜ್ಯಗಳೊಂದಿಗೆ ಸಂಪರ್ಕಿಸಿ, ಯಾವ ರೀತಿ ಕಳುಹಿಸಬೇಕೆಂಬುವುದರ ಕುರಿತು ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.