ಚೆಕ್‌ಪೋಸ್ಟ್ ತಪ್ಪಿಸಿ ಜಿಲ್ಲೆಯೊಳಗೆ ಬಂದವರ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಜಿ.ಜಗದೀಶ

ಉಡುಪಿ ಏ.14: ಕೋವಿಡ್-19 ಗೆ ಸಂಬ0ದಿಸಿದ0ತೆ,  ಜಿಲ್ಲೆಯ ಪ್ರಜ್ಞಾವಂತ ನಾಗರೀಕರ ಸಹಕಾರದೊಂದಿಗೆ ರೋಗ ಹರಡುವುದನ್ನು ತಡೆಗಟ್ಟುವುದರಲ್ಲಿ ಆದಷ್ಟು ಮಟ್ಟಿಗೆ ಪ್ರಗತಿಯನ್ನು ಕಂಡಿದ್ದೇವೆ. ಆದರೆ ನಾವು ಇನ್ನೂ ಕೂಡಾ ಜಾಗೃತರಾಗಿ ಲಾಕ್ ಡೌನ್ ಅನ್ನು ಪಾಲಿಸುವ ಅಗತ್ಯವಿದೆ. ಕೆಲವು ಜನ ಅನಗತ್ಯವಾಗಿ ಹೊರಗಡೆ ತಿರುಗಾಡುವುದು, ಲಾಕ್ ಡೌನ್ ಮೂಲ ಉದ್ದೇಶವನ್ನು  ಅರುತುಕೊಳ್ಳದೇ ಅದನ್ನು ಧಿಕ್ಕರಿಸುವುದು  ಕಂಡು ಬಂದಿದ್ದು, ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಈಗಾಗಲೇ 413 ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಳು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಗಡಿಗಳನ್ನು ಈಗಾಗಲೇ  ಬಂದ್ ಮಾಡಿ, ಬೇರೆ ಜಿಲ್ಲೆಗಳನ್ನು ಸಂಪರ್ಕಿಸುವ ಚೆಕ್ ಪೋಸ್ಟ್ ಗಳಲ್ಲಿ  ದಿನದ 24 ಗಂಟೆ ಬಂದೋಬಸ್ತ್ ಮಾಡಲಾಗಿದೆ. ತೀರ ತುರ್ತು ವೈದ್ಯಕೀಯ ಅಗತ್ಯದ ವಾಹನ ಹಾಗೂ ಅಗತ್ಯ ವಸ್ತುಗಳ ಸಾಗಾಟ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ ಮುಂಬೈ, ಬೆಂಗಳೂರು, ಭಟ್ಕಳ, ಹೈದ್ರಾಬಾದ್, ಮೈಸೂರು ಮುಂತಾದ ಕಡೆಗಳಿಂದ  ಈ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿ, ಜನರು ಒಳ ಬರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಅಂತಹವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಬೇಕಾದ  ಅವಶ್ಯಕತೆ ಇದೆ.

ಆದ್ದರಿಂದ ಜಿಲ್ಲೆಯ ಸಾರ್ವಜನಿಕರು, ಈ ತರಹ ಗಡಿ ತಪ್ಪಿಸಿ ಎಪ್ರಿಲ್ 1 ರ ನಂತರ ಜಿಲ್ಲೆಯೊಳಗೆ ಬಂದಿರುವರ ವಿವರವಾದ (ವಿಳಾಸ, ಮೊಬೈಲ್ ಸಂಖ್ಯೆ,  ಬಂದ ದಿನಾಂಕ, ಎಲ್ಲಿಂದ ಬಂದಿದ್ದಾರೆ) ಮಾಹಿತಿಯನ್ನು, ಚಂದ್ರಶೇಖರ ನಾಯ್ಕ್, ಉಪ ನಿರ್ದೇಶಕರು ಕೃಷಿ ಇಲಾಖೆ,( 82779 32501), ಕೃಷ್ಣ ಹೆಬ್ಸೂರ್, ಕಾರ್ಯ ನಿರ್ವಾಹಕ ಇಂಜಿನಿಯರ್, ಕೆ.ಆರ್.ಐ.ಡಿ.ಎಲ್ (94495 34792), ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನ ಮತ್ತು ಕ್ರೀಡಾ ಇಲಾಖೆ(98454 32303) ಈ ಅಧಿಕಾರಿಗಳಿಗೆ ನೀಡಲು ಅಥವಾ ವಾಟ್ಸಾಪ್ ಮಾಡಲು ಕೋರಿದೆ.

ಗಡಿ ತಪ್ಪಿಸಿ  ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಕ್ವಾರಂಟೈನ್ ನಲ್ಲಿ ಇಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಆದ್ದರಿಂದ ಸಾರ್ವಜನಿಕರು, ಗಡಿ ತಪ್ಪಿಸಿ ಬಂದವರ  ಮಾಹಿತಿ ನೀಡಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.