ಉಡುಪಿ: ಜಿಲ್ಲಾ ಜಾತ್ಯತೀತ ಜನತಾದಳದ (ಜೆಡಿಎಸ್) ವತಿಯಿಂದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ 60ನೇ ವರ್ಷದ ಜನ್ಮದಿನಾಚರಣೆಯನ್ನು ಸೋಮವಾರ ಮಿಷನ್ ಕಾಂಪೌಂಡಿನ ಸಮೀಪದ ವಿಶೇಷ ಮಕ್ಕಳ ವಸತಿ ಶಾಲೆ ‘ಆಶಾ ನಿಲಯ’ದಲ್ಲಿ ಆಚರಿಸಲಾಯಿತು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ವಿ. ಯೋಗೀಶ್ ಶೆಟ್ಟಿ ಕಾಪು ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸುಮಾರು 30 ಸಾವಿರ ಕೋಟಿ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದಾರೆ.
ಸರ್ಕಾರ ಹಾಗೂ ವಿವಿಧ ಸೌಲಭ್ಯಗಳನ್ನು ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶಕ್ತಿರಿಗೆ, ಮಹಿಳೆಯರಿಗೆ, ಅಂಗವಿಕರಿಗೆ ವಿವಿಧ ಸೌಲಭ್ಯಗಳನ್ನು ಜಾರಿಗೊಳಿಸಿ ಅವರು, ಜನನಾಯಕರೆಂದು ಎನಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಯೋಗೀಶ್ ಶೆಟ್ಟಿ ಅವರು ಆಶಾ ನಿಲಯದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ತಿನ್ನಿಸಿದರು. ಮಕ್ಕಳಿಗಾಗಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಜೆಡಿಎಸ್ ಪಕ್ಷದ ಮುಖಂಡರಾದ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಇಕ್ಬಾಲ್ ಆತ್ರಾಡಿ, ಬಿ.ಟಿ. ಮಂಜುನಾಥ್, ಜಯರಾಮ ಆಚಾರ್ಯ, ಪ್ರಕಾಶ್ ಶೆಟ್ಟಿ, ಬಿರ್ತಿ ಗಂಗಾಧರ್, ಹರಿಣಿ ನಾಯಕ್, ರಂಗನಾಥ್, ಪ್ರದೀಪ್, ಅಬ್ದುಲ್ ರಜಾಕ್, ಸಂಶುದ್ದೀನ್ ಉಪಸ್ಥಿತರಿದ್ದರು.












