ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಉಡುಪಿ: ಸುಮಾರು ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭಾನುವಾರ (ಸೆ.21) ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಿದರು‌.

ಆ ಮೂಲಕ ಉಡುಪಿ ನಗರದ ಎರಡು ದಶಕದ ಕನಸೊಂದು ನನಸಾದಂತಾಗಿದೆ.ಮಲ್ಪೆಯಿಂದ ಚಿತ್ರದುರ್ಗದ ಮೊಳಕಾಲ್ಮೂರು ನಡುವೆ ರಾಷ್ಟ್ರೀಯ ಹೆದ್ದಾರಿ 169 ಎ ನಿರ್ಮಾಣ ಆಗುತ್ತಿದ್ದು, ಉಡುಪಿಯ ಇಂದ್ರಾಳಿ ಬಳಿ ರೈಲ್ವೆ ಟ್ರ್ಯಾಕ್ ಹಾದು ಹೋಗುತ್ತದೆ. ಹಲವಾರು ತಾಂತ್ರಿಕ ಸಮಸ್ಯೆಗಳಿಂದ ರೈಲ್ವೆ ಬ್ರಿಡ್ಜ್ ಕಾಮಗಾರಿ ವಿಳಂಬವಾಗಿತ್ತು. ಸುಮಾರು ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಗ್ಗೆ ಸಾಕಷ್ಟು ಹೋರಾಟಗಳು ಆಗಿತ್ತು. ಭಾರೀ ವಾದ ವಿವಾದಗಳು, ಟ್ರೋಲ್‌ಗಳು ನಡೆದಿದ್ದವು. ಇದೀಗ ರೈಲ್ವೆ ಬ್ರಿಡ್ಜ್‌ ಪೂರ್ಣಗೊಂಡಿದ್ದು, ಕೊಂಕಣ ರೈಲು ಸಂಚಾರವನ್ನು ತಡೆ ಮಾಡದೆ ಈ ಬ್ರಿಡ್ಜನ್ನು ನಿರ್ಮಾಣ ಮಾಡಿರುವುದು ವಿಶೇಷ. ಹೊಸ ಬ್ರಿಡ್ಜ್ ನಿರ್ಮಾಣದೊಂದಿಗೆ ಅಪಘಾತ, ಒನ್ ವೇ, ಟ್ರಾಫಿಕ್ ಜಾಮ್, ಪಾದಚಾರಿಗಳ -ವಾಹನ ಸವಾರರ ಪರದಾಟಕ್ಕೂ ಪರಿಹಾರ ಸಿಕ್ಕಿದಂತಾಗಿದೆ.