ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಪ್ರಕರಣ: ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ- ಬೊಮ್ಮಾಯಿ

ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪಿತಸ್ಥರಿದ್ದರು ನಾವು ನ್ಯಾಯಸಮ್ಮತ ತನಿಖೆ ಮಾಡುತ್ತೇವೆ. ಇದನ್ನು ಮೊದಲ ದಿನದಿಂದಲೇ ಹೇಳಿದ್ದೇನೆ. ಅಲ್ಲದೆ ಯಾವುದೇ ಸಂಘಟನೆ, ವ್ಯಕ್ತಿಯ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದರು.
ಪೊಲೀಸರು ಮೊದಲನೆ ದಿನದಿಂದ ಸಿಸಿಟಿವಿಯ ದೃಶ್ಯಾವಳಿಗಳನ್ನು ಆಧಾರಿಸಿ ತೀವ್ರವಾದ ತನಿಖೆ ನಡೆಸಿದ ಪರಿಣಾಮ ಆರೋಪಿ ಶರಣಾಗಿದ್ದಾನೆ. ಪೊಲೀಸರು ನಿಪಕ್ಷಪಾತವಾಗಿ ಹಾಗೂ ದಕ್ಷತೆಯಿಂದ ಕೆಲಸ ಮಾಡಿದ ಪರಣಾಮ ಪ್ರಕರಣದ ಹಿನ್ನೆಲೆಯನ್ನು ಶೀಘ್ರವಾಗಿ ಭೇದಿಸಲು ಸಾಧ್ಯವಾಯಿತು ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲಿದ್ದು, ಅವರು ಈ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ ಅವರಿಗಿದೆ. ಅವರು ಆದಷ್ಟು ಬೇಗ ಪಕ್ಷದ ವರಿಷ್ಠರ ಜತೆಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ನಾಡಿಗೆ ಸಿಕ್ಕಿದ ಗೌರವ:
ಪೇಜಾವರಶ್ರೀ ದೇಶದಾದ್ಯಂತ ಧರ್ಮಜಾಗೃತಿ ಮಾಡಿದ ಮಹಾನ್ ಶಾಂತಿಧೂತ. ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದರಿಂದ ಇಡೀ ನಾಡಿಗೆ ಗೌರವ ದೊರೆತಿದೆ ಎಂದರು.
ಅವರ ಪ್ರತಿಪಾದಿಸಿದ ವಿಚಾರ, ಸಿದ್ದಾಂತಗಳಿಗೆ ಗೌರವಕೊಟ್ಟು, ಮುಂದಿನ ದಿನಗಳಲ್ಲಿ ನಾವು ಕೂಡ ಆ ಹಾದಿಯಲ್ಲಿಯೇ ಮುನ್ನಡೆಯುವ ಮೂಲಕ ಪ್ರಶಸ್ತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು