ಉಡುಪಿ: ಹೆಜ್ಜೆ ಗೆಜ್ಜೆ ನೃತ್ಯಾಲಯದ ಆಶ್ರಯದಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಅವರು ಸಂಯೋಜಿಸಿದ ಸುಮಾರು 23 ಕಲಾವಿದರನ್ನೊಳಗೊಂಡ ನೂತನ ಭರತನಾಟ್ಯ ನೃತ್ಯಬಂಧಗಳ “ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ”ವನ್ನು ಆ. 24ರಂದು ಉಡುಪಿ ಕುಂಜಿಬೆಟ್ಟು ಸಮೀಪದ ಐವೈಸಿ ಇನ್ಫೋಸಿಸ್ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹೆಜ್ಜೆ ಹೆಜ್ಜೆ ನಿರ್ದೇಶಕಿ ಯಶಾ ರಾಮಕೃಷ್ಣ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಸಂಜೆ 5 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕಿ ವಿದುಷಿ ಶಾರದಾಮಣಿ ಶೇಖರ್, ಹಿರಿಯ ನೃತ್ಯ ಗುರು ವಿದುಷಿ ಶ್ರೀಲತಾ ನಾಗರಾಜ್, ಭರತನಾಟ್ಯ ಕಲಾವಿದ ನಟುವನಾರ್ ಮಂಜುನಾಥ ಎನ್. ಪುತ್ತೂರು ಮತ್ತು ಸಮಾಜ ಸೇವಾ ಧುರೀಣ ಡಾ. ಶರಣಬಸವ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿದುಷಿ ದೀಕ್ಷಾ ರಾಮಕೃಷ್ಣ ಮತ್ತು ವಿದುಷಿ ರಂಜನಿ ಸಾಮಗ ಉಪಸ್ಥಿತರಿದ್ದರು.












