ಉದ್ಯಾವರ :ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ವತಿಯಿಂದ 1.5 ಲಕ್ಷ ರೂ. ಮೌಲ್ಯದ ಉಚಿತ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ

ಕಟಪಾಡಿ: ದಾನ ಪ್ರವೃತ್ತಿಯ ವಿಸ್ತಾರ, ಎತ್ತರವನ್ನು ಜಾತಿ ಮತ ಬೇಧವಿಲ್ಲದೆ ಮೆರೆದಿರುವ ಉದ್ಯಾವರ ಗ್ರಾ.ಪಂ. ಸದಸ್ಯ ಯೋಗೀಶ್ ಎಸ್. ಕೋಟ್ಯಾನ್ ಅವರ ಸಮಾಜದ ಋಣವನ್ನು ತೀರಿಸುವ ಸ್ತುತ್ಯಾರ್ಹ. ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡುವ ಚಿಂತನಾ ಶೀಲ ಬದುಕು ನಮ್ಮದಾಗಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ ಬದುಕನ್ನೇ ಶ್ರೀಮಂತಗೊಳಿಸೋಣ. ಛಲದ ಬಲದಿಂದ ಸಾಧನೆಯನ್ನು ಸಾಕ್ಷಾತ್ಕಾರಗೊಳಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕರೆ ನೀಡಿದರು.

ಅವರು ಮೇ 25 ರಂದು ಉದ್ಯಾವರ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಉದ್ಯಾವರ ಗ್ರಾ.ಪಂ. ಸದಸ್ಯರಾದ ಯೋಗೀಶ್ ಎಸ್ ಕೋಟ್ಯಾನ್ ವತಿಯಿಂದ 5ನೇ ವರ್ಷದಲ್ಲಿ 1.5 ಲಕ್ಷ ರೂ. ಮೊತ್ತದಲ್ಲಿ 184 ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾನ್ವಿತರಿಗೆ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯಾವರ ಗ್ರಾ.ಪಂ. ಸದಸ್ಯರಾದ ಯೋಗೀಶ್ ಎಸ್ ಕೋಟ್ಯಾನ್ ಮಾತನಾಡಿ, ಕೆ.ಜಿ.ಯಿಂದ ಪಿ.ಜಿ. ವರೆಗಿನ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರವಣಿಗೆ ಪುಸ್ತಕ ವಿತರಣೆ ಮಾಡಲಾಗಿದೆ. ಪ್ರತಿಭಾನ್ವಿತರನ್ನು ಸಮ್ಮಾನಿಸಲಾಗಿದ್ದು, ಮತ್ತಷ್ಟು ಶೈಕ್ಷಣಿಕ ಪ್ರತಿಭೆಗಳು ನಮ್ಮೂರಲ್ಲಿ ಮೂಡಿ ಬರಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.

ಉಡುಪಿ ನಗರಸಭೆ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಅರೂರುತೋಟ ಫ್ರೆಂಡ್ಸ್ ಗಾರ್ಡನ್ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಬಿಜೆಪಿ ಕಾಪು ಮಂಡಲ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ಉದ್ಯಾವರ ಶುಭವನ್ನು ಹಾರೈಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆದ್ಯಾ ಎಸ್. ಶೆಟ್ಟಿ, ವೈಷ್ಣವ, ಮಾನ್ಯ, ಶ್ರೇಯಾ ಪಿ. ಪೂಜಾರಿ, ಜಯದೀಪ್ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ವಂಶಿ ವೈ. ಕೋಟ್ಯಾನ್ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಉದ್ಯಾವರ ಗ್ರಾ.ಪಂ. ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಉದ್ಯಮಿ ಹರೀಶ್ ಕುಮಾರ್, ಲಾವಣ್ಯ ಯೋಗೀಶ್ ಇದ್ದರು.ಉದ್ಯಾವರ ಬಿಲ್ಲವ ಸಮಾಜದ ಗುರಿಕಾರ ದಿನೇಶ್ ಜತ್ತನ್ ಸ್ವಾಗತಿಸಿದರು. ವಿಜೇತಾ ಶೆಟ್ಟಿ ನಿರೂಪಿಸಿದರು.
ಫೋಟೋ: