ಉಡುಪಿ: ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಸಕರಿಂದ ಸನ್ಮಾನ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ಅತ್ಯುತ್ತಮ ಸಾಧನೆಗೈದು ಉಡುಪಿಯ ಕೀರ್ತಿ ಹೆಚ್ಚಿಸಿದ ಇಬ್ಬರು ವಿದ್ಯಾರ್ಥಿಗಳ ಮನೆಗೆ ಇಂದು ಶಾಸಕ ರಘುಪತಿ ಭಟ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ವಿದ್ಯಾರ್ಥಿಗಳಿಗೆ CET ಹಾಗೂ NEET ಸೇರಿದಂತೆ ಎರಡು ವರ್ಷದ ವಿದ್ಯಾಭ್ಯಾಸವನ್ನು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ವ್ಯವಸ್ಥೆ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಮಲ್ಪೆ ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಕಲ್ಮಾಡಿಯ ಕಲ್ಲಪ್ಪ ಹಾಗೂ ಲಲಿತ ದಂಪತಿಗಳ ಮಗನಾದ ಪುನೀತ್ ನಾಯ್ಕ್ ಹಾಗೂ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಂಜಿಬೆಟ್ಟು ನಿವಾಸಿ ಪ್ರಕಾಶ್ ದೇವಾಡಿಗ ಹಾಗೂ ವಸಂತಿ ದಂಪತಿಗಳ ಮಗಳಾದ ಗಾಯತ್ರಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮನೋಹರ್ ಕಲ್ಮಾಡಿ, ಸ್ಥಳೀಯ ನಗರಸಭಾ ಸದಸ್ಯರಾದ ಸುಂದರ್ ಕಲ್ಮಾಡಿ, ಗಿರೀಶ್ ಅಂಚನ್, ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ವಿನಯ್ ಕಲ್ಮಾಡಿ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ರೋಷನ್ ಶೆಟ್ಟಿ ಉಪಸ್ಥಿತರಿದ್ದರು.