ಮತ್ಸ್ಯಕ್ಷಾಮದಿಂದ ಪಾರಾಗಲು ಬೊಬ್ಬರ್ಯನ ‌ಮೊರೆ ಹೋದ ಮೀನುಗಾರರ ಸಂಘ

ಉಡುಪಿ: ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮತ್ಸ್ಯಕ್ಷಾಮದಿಂದ ಮೀನುಗಾರರನ್ನು ಪಾರು ಮಾಡುವಂತೆ ಕೋರಿ ಮಲ್ಪೆ ಪರ್ಸಿನ್‌ ಮೀನುಗಾರರ ಸಂಘದವರು ಮಲ್ಪೆ ಕಲ್ಮಾಡಿಯ ಬೊಬ್ಬರ್ಯ ದೈವಸ್ಥಾನದಲ್ಲಿ ಶನಿವಾರ ವಿಶೇಷ ದರ್ಶನ ಸೇವೆ ಸಲ್ಲಿಸಿದರು.

ಈ ವೇಳೆ ಮಲ್ಪೆ ಪರ್ಸಿನ್‌ ಮೀನುಗಾರರ ಸಂಘದ ಉಪಾಧ್ಯಕ್ಷ ಚಂದ್ರ ಸಾಲ್ಯಾನ್‌ ಮಾತನಾಡಿ, ಕಳೆದ ಎರಡು ತಿಂಗಳುಗಳಿಂದ ಸಮುದ್ರದಲ್ಲಿ ಎಲ್ಲಿ ಹೋದರೂ ಮೀನುಗಳೇ ಸಿಗುತ್ತಿಲ್ಲ. ಮಂಗಳೂರು, ಕಾರವಾರ, ಕೇರಳ ಭಾಗದಲ್ಲೂ ಮೀನುಗಳು ಇಲ್ಲವಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಸಂಪಾದನೆ ಇಲ್ಲದೆ ಹೊರರಾಜ್ಯದ ಕಾರ್ಮಿಕರು ಊರಿಗೆ ಮರಳಿದ್ದಾರೆ. ಇದರಿಂದ ಪರ್ಸಿನ್‌ಮೀನುಗಾರರಿಗೆ ಬಹಳ ದೊಡ್ಡ ಸಮಸ್ಯೆ ಎದುರಾಗಿದೆ.

ಶೇ. 50ರಷ್ಟು ಪರ್ಸಿನ್‌ ಬೋಟುಗಳು ಬಂದರಿನಲ್ಲಿ ಲಂಗಾರು ಹಾಕಿವೆ ಎಂದು ಅಳಲು ತೋಡಿಕೊಂಡರು. ನಮಗೆ ಕಷ್ಟ ಬಂದಾಗ ನಾವು ದೇವರ ಮೇಲೆ ನಂಬಿಕೆ ಇಡುತ್ತೇವೆ. ಈಗಾಗಲೇ ಅಂಬಲಪಾಡಿ ದೇವಳದಲ್ಲಿ ಕುಂಕುಮ ಅರ್ಚನೆ ಸಲ್ಲಿಸಿದ್ದೇವೆ. ಈಗ ಬೊಬ್ಬರ್ಯ ದೈವದ ಮೇಲೆ ನಂಬಿಕೆ ಇಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದರು.

ಮೀನುಗಾರ ಕಾರ್ಮಿಕ ಸಂಘದ ಉಪಾಧ್ಯಕ್ಷ ರಮೇಶ್‌ ಮೆಂಡನ್‌ ಮಾತನಾಡಿ, ಮೊದಲು ಪ್ರತಿ ಆಗಸ್ಟ್‌ನಿಂದ ನವೆಂಬರ್‌ವರೆಗೆ ಸಮುದ್ರ ತುಂಬಾ ತಂಪಾಗಿರುತ್ತಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಜಾತಿಯ ಮೀನುಗಳು ಮೇಲೆ ಬರುತ್ತಿದ್ದವು. ನಾವುಮೀನುಗಳನ್ನು ನೋಡಿಯೇ ಬಲೆ ಹಾಕುತ್ತಿದ್ದೇವು. ಕಾಲಕ್ರಮೇಣ ಸಮುದ್ರದ ಉಷ್ಣಾಂಶ ಜಾಸ್ತಿಯಾಗುತ್ತ ಬರುತ್ತಿದ್ದು, ಮೀನುಗಳು ಕಣ್ಣಿಗೆ ಗೋಚರವಾಗುತ್ತಿಲ್ಲ ಎಂದರು.

ಈ ವರ್ಷ ಭಾರೀ ಗಾಳಿ, ಮಳೆ, ನೆರೆ ಬಂದರೂ ಕೂಡ ಸಮುದ್ರದ ಮೇಲ್ಭಾಗ ತುಂಬಾ
ಬಿಸಿಯಾಗಿದೆ. ಸಮುದ್ರದಲ್ಲಿ ಮೀನುಗಳು ಸಾಕಷ್ಟು ಇವೆ. ಆದರೆ ಸಮುದ್ರದ ಮೇಲ್ಭಾಗ
ಬಿಸಿಯಾಗಿರುವುದರಿಂದ ಮೀನುಗಳು ತಳಭಾಗಕ್ಕೆ ಹೋಗಿರುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿ ಈವರೆಗೆ ಬಂದಿಲ್ಲ. ಉಷ್ಣಾಂಶದಿಂದ ಜನವರಿ, ಫೆಬ್ರವರಿಯಲ್ಲಿ ಬದಲಾಗುವ ಸಮುದ್ರದ ನೀರಿನ ಬಣ್ಣ ಈ ಬಾರಿ ಆಗಸ್ಟ್‌ ತಿಂಗಳಿನಲ್ಲೇ ಕಂಡುಬಂದಿದೆ. ಈಗ ನಮಗೆ ಹೇರಳವಾಗಿ ಮೀನು ಸಿಗುವ ಸಮಯ. ಇದೇ ಸಮಯದಲ್ಲಿ ಸಿಗದಿದ್ದರೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ. ಉಳಿದ ಮೀನುಗಾರರಿಗಿಂತ ಹೆಚ್ಚು ಸಮಸ್ಯೆಗೆ ಒಳಪಟ್ಟಿದ್ದೇವೆ ಎಂದು ಹೇಳಿದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಮೊದಲಾದವರು ಇದ್ದರು.

ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ:

ಸಾಲ ಮಾಡಿ ಬೋಟ್‌ ಹಾಕಿದ್ದೇವೆ. ಆದರೆ ಈಗ ದುಡಿಮೆ ಇಲ್ಲದೆ ಸಾಲ ಕಟ್ಟಲು
ಸಾಧ್ಯವಾಗುತ್ತಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ನಮ್ಮ
ಕಷ್ಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು. ಮಾನವೀಯತೆ ದೃಷ್ಟಿಯಿಂದ ರೈತರಿಗೆ
ನೀಡುವಂತೆ ಮೀನುಗಾರರಿಗೂ ಪರಿಹಾರ ನೀಡಬೇಕು ಎಂದು ಮೀನುಗಾರ ಕಾರ್ಮಿಕ ಸಂಘದ‌ ಉಪಾಧ್ಯಕ್ಷ ರಮೇಶ್‌ ಮೆಂಡನ್‌ ಒತ್ತಾಯಿಸಿದರು.