ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿಗಳು ಖ್ಯಾತ ಆಧ್ಯಾತ್ಮಿಕ ಚಿಂತಕರು ಆದ ಶ್ರೀ ಶ್ರೀ ರಮಾನಂದ ಗುರೂಜಿ ಅವರ 60ನೇ ವರ್ಷದ ಹುಟ್ಟು ಹಬ್ಬ ಸಮಾರಂಭ ಕ್ಷೇತ್ರದಲ್ಲಿ ನೆರವೇರಿತು.
ವೇದಮೂರ್ತಿ ವಿಖ್ಯಾತ ಭಟ್ ನೇತೃತ್ವದಲ್ಲಿ ನೆರವೇರಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂರ್ವಭಾವಿ ಕಾರ್ಯಕ್ರಮವಾಗಿ ಕ್ಷೇತ್ರದಲ್ಲಿ ಸಾಯಂಕಾಲ ಪೂರ್ಣಮಾನ ಸುದರ್ಶನ ಯಾಗ, ಕಲಶ ಪ್ರತಿಷ್ಠಾಪನ ವಿಧಿಗಳು, ಪ್ರಾತ: ಕಾಲದಲ್ಲಿ ತ್ರಿನಾಳಿಕೇರ ಗಣ ಯಾಗ, ಪೂರ್ಣಮಾನ ಧನ್ವಂತರಿಯಾಗ, ಮಾರ್ಕಂಡೇಯ ಹೋಮ, ನವಗ್ರಹ ಯಾಗಗಳು ಸಂಪನ್ನಗೊಂಡವು.

ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕಲಶ ಆರಾಧನೆ, ಕಲಶ ಸ್ನಾನದ ಬಳಿಕ 60ನೇ ವರುಷದ ಸಾಂಪ್ರದಾಯಿಕ ಆಚರಣೆ ವಿಪ್ರಮೋತ್ತಮರ ಸಮಕ್ಷಮದಲ್ಲಿ ಶ್ರೀ ಗುರುಜಿಯವರ ಅನುಯಾಯಿಗಳ ಸಹಕಾರದೊಂದಿಗೆ ನೆರವೇರಿತು.

ಸರ್ವಾಲಂಕೃತಗೊಂಡ ವೇದಿಕೆಯಲ್ಲಿ ಶ್ರೀ ಗುರೂಜಿ ದಂಪತಿಗಳನ್ನು ಅವರ ಅನುಯಾಯಿಗಳು, ಕ್ಷೇತ್ರದ ಭಕ್ತ ಸಮೂಹ ಗೌರವಿಸಿ ಅಭಿನಂದಿಸಿದರು.
ಋತ್ವಿಜರ ಆರಾಧನೆ,ಷೋಡಶ ದಂಪತಿ ಆರಾಧನೆ, ಪಂಚ ಬ್ರಹ್ಮಚಾರಿ ಆರಾಧನೆ, ಪಂಚ ಕನ್ನಿಕರಾಧನೆಗಳು, ಅಷ್ಟೊತ್ತರ ಶತ ಸುಹಾಸಿನಿ ಆರಾಧನೆಗಳು ನೆರವೇರಿದವು.ಸುಹಾಸಿನಿಯರು ದಂಪತಿಗಳಿಗೆ ಆರತಿ ಬೆಳಗಿ ಶೋಭಾನೆ ಹಾಡಿ ಶತಾಯುಷಿಗಳಾಗಿ ಬಾಳುವಂತೆ ಹಾರೈಸಿದರು.

ಅನುಗ್ರಹಿತ ಭಕ್ತನಾಗಿ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿರುವ ರಮಾನಂದ ಗುರೂಜಿಯವರು ಕಾಲಾಯ ತಸ್ಮೈ ನಮಃ ಪರಿವರ್ತಿತ ಜೀವನ ಅನುಗ್ರಹಿಸಿದ ಕಾಲಕ್ಕೆ ಶರಣು ಎಂದು ಆಗಮಿಸಿದ ಎಲ್ಲರಿಗೂ ಶ್ರೀ ವಿಷ್ಣು ಸಹಸ್ರನಾಮ ಹೊತ್ತಗೆಯನ್ನು ನೆನಪಿನ ಕಾಣಿಕೆಯಾಗಿ ವಿತರಿಸಿದರು.
ಕ್ಷೇತ್ರದಲ್ಲಿ ಸಹಸ್ರ ಸಹಸ್ರ ಸಂಖ್ಯೆಗೂ ಮಿಕ್ಕಿದ ಭಕ್ತರುಗಳು ಮೃಷ್ಟಾನ್ನ ಪ್ರಸಾದ ಸ್ವೀಕರಿಸಿದರು.ಬನ್ನಂಜೆ ಶನಿ ಕ್ಷೆತ್ರದ ಶ್ರೀ ರಾಘವೇಂದ್ರ ತೀರ್ಥ ಶ್ರೀಗಳು, ಆಗಮಿಸಿದ್ದರು.ಹಾಗೂ ಚಿತ್ರದುರ್ಗ ಶ್ರೀ ಮಾಚಿದೇವ ಮಹಾ ಸಂಸ್ಥಾನ ಮಠದ ಜಗದ್ಗುರು ಬಸವ ಮಾಚಿದೇವ ಮಹಾಸ್ವಾಮಿಗಳು ಆಗಮಿಸಿ ಆಶೀರ್ವದಿಸಿದರು.ಬಹುಭಾಷಾ ನಟಿ ಮೀನಾ ಬೆಂಗಳೂರು ಸುರ್ವೆ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ನಟ ನಿರ್ಮಾಪಕ ರಮೇಶ್ ಸುರ್ವೆ ಷಷ್ಟಿಪೂರ್ತಿ ಯಾಗದ ಮಹಾ ಪ್ರಸಾದವನ್ನು ಕೊರಂಗ್ರಪಾಡಿ ವೇದಮೂರ್ತಿ ಶ್ರೀಶ ಆಚಾರ್ಯ, ವೇದಮೂರ್ತಿ ಕೊರಂಗ್ರ ಪಾಡಿ ಕೃಷ್ಣಮೂರ್ತಿ ತಂತ್ರಿ, ಶ್ರೀ ಗಣೇಶ ಸರಳಯರು, ವಿಶೇಷ ಪ್ರಾರ್ಥನೆ ನೆರವೇರಿಸಿ ಪ್ರಧಾನ ಮಾಡಿದರು.

ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ದಶ ಸಹಸ್ರ ಸಂಖ್ಯೆಯಲ್ಲಿ ವಿವಿಧ ಸ್ತುತಿಗಳಿಂದ ಶ್ವೇತ ಪುಷ್ಪದಲ್ಲಿ ಅರ್ಚನಾ ಪೂಜೆಯು ವೇದಮೂರ್ತಿ ಸರ್ವೇಶ ತಂತ್ರಿ ಮತ್ತು ಶಿಷ್ಯ ವರ್ಗದವರಿಂದ ನೆರವೇರಿತು.
ಶ್ರೀ ಗುರೂಜಿಯವರ ಅನುಯಾಯಿಗಳೇ ಆಯೋಜಿಸಿದ ಈ ಕಾರ್ಯಕ್ರಮ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್ ತಿಳಿಸಿರುತ್ತಾರೆ.












