ಎಂಡಿ ಲಕ್ಷ್ಮಿನಾರಾಯಣ್ ಅವರನ್ನು ಎಂಎಲ್ ಸಿ ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಮೋರ್ಚಾ ಆಗ್ರಹ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ಎಂಡಿ ಲಕ್ಷ್ಮಿನಾರಾಯಣ (ಅಣ್ಣಯ್ಯ) ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗ ಆಗ್ರಹಿಸಿದೆ.
ಲಕ್ಷ್ಮೀನಾರಾಯಣ್ ಅವರು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯಾದ್ಯಂತ ಸಂಚರಿಸಿ ಹಿಂದುಳಿದ ವರ್ಗಗಳ ಸಂಘಟನೆ ಮಾಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ,ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ಕೊಟ್ಟು ಪಕ್ಷದಲ್ಲಿ ದುಡಿಯುವಂತೆ ಪ್ರೋತ್ಸಾಹಿಸಿದ್ದಾರೆ. ಚುನಾವಣೆಗಳು ನಡೆದಂತಹ ಸಂದರ್ಭಗಳಲ್ಲಿ ರಾಜ್ಯದ ಮೂಲೆ ಮೂಲೆಗೆ ಹೋಗಿ ಒಬಿಸಿ ಕಾರ್ಯಕರ್ತರಿಗೆ ಜವಾಬ್ದಾರಿಗಳನ್ನು ನೀಡಿ ಸಂಘಟನೆಯನ್ನು ಮಾಡಿದ್ದಾರೆ. ಹಾಗೆ ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ನೂರಕ್ಕೂ ಹೆಚ್ಚು ಜನಾಂಗದವರನ್ನು ಗುರುತಿಸಿ ಅವರೆಲ್ಲರಿಗೂ ಸ್ಥಾನಮಾನಗಳನ್ನು ನೀಡಿದ್ದಾರೆ.
ಎಲ್ಲಾ ಜಿಲ್ಲೆಗಳಿಂದ ಬರುವಂತೆ ಕಾಂಗ್ರೆಸ್ ಓಬಿಸಿ ಮುಖಂಡರಿಗೆ ವಿಧಾನಸೌಧದಲ್ಲಿನ ಕೆಲಸಗಳಿರಬಹುದು ಮತ್ತು ಅವರ ಜಿಲ್ಲೆಯಲ್ಲಿ ಇರುವಂತಹ ಸಮಸ್ಯೆಗಳಿರಬಹುದು, ಶಾಸಕರು ಸಚಿವರನ್ನು ಭೇಟಿ ಮಾಡಿ ಕುಂದು ಕೊರತೆಗಳ ನಿವಾರಣೆ ಮಾಡಿಸಿ ಎಲ್ಲಾ ರೀತಿಯಲ್ಲೂ ಹಿಂದುಳಿದ ವರ್ಗಗಳನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಕಟ್ಟುವುದರ ಜತೆಗೆ ಪಕ್ಷವನ್ನು ಇನ್ನೂ ಸದೃಢಗೂಳಿಸುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತಿರುವ ಅವರ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವಂತೆ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಅಧ್ಯಕ್ಷ ಯತೀಶ್ ಕರ್ಕೇರಾ ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.