ಜಿಲ್ಲೆಯಲ್ಲಿ ಟ್ರಾನ್ಸ್ ಜೆಂಡರ್ಸ್‍ ನೊಂದಣಿ ಅಭಿಯಾನ: ಜಿಲ್ಲಾಧಿಕಾರಿ

ಉಡುಪಿ, ಜುಲೈ 6: ಉಡುಪಿ ಜಿಲ್ಲೆಯಲ್ಲಿರುವ ಟ್ರಾನ್ಸ್ ಜೆಂಡರ್ಸ್‍ಗಳಿಗೆ ಸರಕಾರದ ವಿವಿಧ ಸೌಲಭ್ಯ ನೀಡುವ ನಿಟ್ಟಿನಲ್ಲಿ ಅವರ ನಿಖರ ಸಂಖ್ಯೆ ಇಲ್ಲದ ಕಾರಣ, ಜಿಲ್ಲೆಯಲ್ಲಿನ ಟ್ರಾನ್ಸ್ ಜೆಂಡರ್ಸ್‍ಗಳನ್ನು ನೊಂದಣಿ ಮಾಡಿ, ಅವರಿಗೆ ಗುರುತಿನ ಚೀಟಿ ವಿತರಿಸಲು ವಿಶೇಷ ನೊಂದಣಿ ಅಭಿಯಾನ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ಮಟ್ಟದ ಟ್ರಾನ್ಸ್ ಜೆಂಡರ್ಸ್ ಸಮನ್ವಯ ಸಮಿತಿ/ಕೋಶ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ 282 ಮಂದಿ ಟ್ರಾನ್ಸ್ ಜೆಂಡರ್ ಮಾತ್ರ ಗುರುತಿಸಿಕೊಂಡಿದ್ದು, 27 ಮಂದಿ ಮೈತ್ರಿ ಯೋಜನೆಯ ಮಾಸಾಶನ ಪಡೆಯುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇನ್ನೂ ಹೆಚ್ಚಿನ ಟ್ರಾನ್ಸ್ ಜೆಂಡರ್ಸ್‍ ಗಳಿದ್ದು ಅವರು ಗುರುತಿಸಿಕೊಳ್ಳದ ಕಾರಣ ಅವರಿಗೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಒದಗಿಸಲು ಅಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಇಂದಿನಿಂದ ಆಗಸ್ಟ್ 1 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಹಸೀಲ್ದಾರ್‍ಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿ ರಚಿಸಿ, ವಿಶೇಷ ನೊಂದಣಿ ಅಭಿಯಾನದ ಮೂಲಕ, ಟ್ರಾನ್ಸ್ ಜೆಂಡರ್ಸ್ ಅವರನ್ನು ನೊಂದಣಿ ಮಾಡಿ, ಅವರಿಗೆ ಆಗಸ್ಟ್ ಒಳಗೆ ಗುರುತಿನ ಚೀಟಿ ವಿತರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಗುರುತಿನ ಚೀಟಿ ಪಡೆದ ಟ್ರಾನ್ಸ್ ಜೆಂಡರ್ಸ್‍ಗಳಿಗೆ ಮೈತ್ರಿ ಯೋಜನೆಯಡಿ ಮಾಸಾಶನ, ಮನೆ ನಿವೇಶನ, ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ, ಅರೋಗ್ಯ ಸೇವೆ ಸೇರಿದಂತೆ, ಟ್ರಾನ್ಸ್  ಜೆಂಡರ್ಸ್‍ ಗಳಿಗೆ ಸರಕಾರ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಒದಗಿಸಲಾಗುವುದು ಎಂದ ಜಿಲ್ಲಾಧಿಕಾರಿ, ಇವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಇಲಾಖೆಗಳು ತಮ್ಮಲ್ಲಿನ ಸೌಲಭ್ಯಗಳನ್ನು ಟ್ರಾನ್ಸ್ ಜೆಂಡರ್ಸ್‍ಗಳಿಗೆ ಒದಗಿಸುವಂತೆ ಮತ್ತು ಈ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ಪ್ರತ್ಯೇಕ ಸಭೆ ನಡೆಸಬೇಕು, ಎಲ್ಲಾ ಇಲಾಖೆಗಳು ಟ್ರಾನ್ಸ್ ಜೆಂಡರ್ಸ್ ಸಮುದಾಯದವರ ಅಭಿವೃದ್ದಿಗಾಗಿ ವಿಶೇಷ ಗಮನ ಹರಿಸುವಂತೆ ಡಿಸಿ ತಿಳಿಸಿದರು.
ಟ್ರಾನ್ಸ್ ಜೆಂಡರ್ಸ್‍ಗಳ ಪರವಾಗಿ ಸಭೆಯಲ್ಲಿ ಹಾಜರಿದ್ದ ಸಂಜೀವ ವಂಡ್ಸೆ ಮತ್ತು ಲಾವಣ್ಯ ಮಾತನಾಡಿ, ಸಮುದಾಯದಲ್ಲಿನ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಎಸ್ಪಿ ಕುಮಾರಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಜಿಲ್ಲಾ ಮಹಿಳಾ ಅಭಿವೃದ್ದಿ ನಿಗಮದ ನಿರೀಕ್ಷಕಿ ಚಂದ್ರಿಕಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.