ಗ್ರಾಹಕರ-ಮಾಲಿಕರ ನಡುವೆ ಕನಿಷ್ಟ 6 ಅಡಿಗಳ ಅಂತರ ಕಡ್ಡಾಯ: ಜಿಲ್ಲಾಧಿಕಾರಿ

ಉಡುಪಿ ಮಾ.23: ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಕೊರೋನಾ ವೈರಾಣುಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಕೆಳಕಂಡ ಕಠಿಣ ಕ್ರಮಗಳನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

ಮಾ. 21 ರ ಸಂಜೆ 4 ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ಬಾರ್‍ಗಳನ್ನು ಮುಚ್ಚಲು ಈಗಾಗಲೇ ಆದೇಶಿಸಲಾಗಿದೆ. ಮದ್ಯದ ಅಂಗಡಿ (ವೈನ್‍ಶಾಪ್) ಗಳು ತೆರೆದಿದ್ದು, ಅಲ್ಲಿ ಗ್ರಾಹಕರ- ಮಾಲಿಕರ ಮತ್ತು ಗ್ರಾಹಕರು-ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ರೆಸ್ಟೋರೆಂಟ್, ಉಪಹಾರ ಗೃಹ, ಹೋಟೆಲ್, ಕೆಫೆಗಳಲ್ಲಿ ಊಟ, ಉಪಹಾರ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅಡುಗೆ ಮನೆಗಳು ತೆರೆದಿದ್ದು, ಗ್ರಾಹಕರು ಆಹಾರವನ್ನು ಖರೀದಿಸಿ, ಕೇವಲ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದು,

ಹಾಗೂ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು, ಎಲೆಕ್ಟ್ರಾನಿಕ್ ಮಳಿಗೆಗಳು ಹಾಗೂ ಮತ್ತಿತರ ಮಳಿಗೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಬೇಕು. ಇತರ ಎಲ್ಲಾ ಸಣ್ಣ-ಸಣ್ಣ ಅಂಗಡಿಗಳಲ್ಲಿ, ಉಪಹಾರ ದರ್ಶಿನಿಗಳಲ್ಲಿ, ತರಕಾರಿ ಅಂಗಡಿ, ಹಣ್ಣು ಹಂಪಲು, ದಿನಸಿ ವಸ್ತುಗಳ ಅಂಗಡಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಅಂಗಡಿಗಳಲ್ಲಿ ಗ್ರಾಹಕರ- ಮಾಲಿಕರ ಮತ್ತು ಗ್ರಾಹಕರು-ಗ್ರಾಹಕರ ನಡುವೆ ಕನಿಷ್ಟ 6 ಅಡಿಗಳ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಅಂತಹ ಅಂಗಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಲಾಗುವುದು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.