ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸರಕಾರದ ಗುರಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಉಡುಪಿ:  ರಾಜ್ಯ ಸರ್ಕಾರದ ಜನಸ್ನೇಹಿ ಆಡಳಿತದ ಒಂದು ವರ್ಷ ಸವಾಲುಗಳ ವರ್ಷವಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲೂ ಸರ್ಕಾರ ಎಲ್ಲಾ ಸವಾಲುಗಳನ್ನು ಎದುರಿಸಿ ಅಭಿವೃದ್ಧಿಯ ಹಾದಿಯಲ್ಲಿ  ಸಾಗುವಲ್ಲಿ ಯಶಸ್ವಿಯಾಗಿದೆ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಈ ಸರಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅವರು  ಸೋಮವಾರ ವಿಧಾನಸೌಧದ ಬ್ರಾಂಕ್ವೆಟ್ ಹಾಲ್‌ನಲ್ಲಿ , ನವತಂತ್ರಜ್ಞಾನದ ವರ್ಚುವಲ್ ವೇದಿಕೆಯ  ಮೂಲಕ ಆಯೋಜಿಸಲಾದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ನೇರ ಪ್ರಸಾರ ಕಾರ್ಯಕ್ರಮ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕೋವಿಡ್ 19 ತಂದೊಡ್ಡಿರುವ ಸಮಸ್ಯೆಯ ನಡುವೆ , ಸಮಾಜದಲ್ಲಿ ಸಂಕಷ್ಟಕ್ಕೀಡಾದ ಜನರಲ್ಲಿ ಭರವಸೆ ಮೂಡಿಸಲು ಜವಾಬ್ದಾರಿಯುತ ಕೆಲಸ ಕಾರ್ಯಗಳು ರಾಜ್ಯ ಸರ್ಕಾರದಿಂದ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಬಡವರಿಗೆ ಯಾವುದೇ  ಸಮಸ್ಯೆಗಳು ಎದುರಾಗಬಾರದೆಂಬ ಉದ್ದೇಶ ಸರ್ಕಾರದ್ದಾಗಿದ್ದು,   ನಾಡಿನ ಎಲ್ಲ ವರ್ಗದ ಜನಾಂಗ ಜನತೆ ನೆಮ್ಮದಿಯಿಂದ ಬದುಕಬೇಕು. ಎಲ್ಲಾ ವರ್ಗಗಳ  ಅಭಿವೃದ್ದಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇರ ಪ್ರಸಾರ ಕರ‍್ಯಕ್ರಮದಲ್ಲಿ ಹೇಳಿದರು

ನೇರ ಪ್ರಸಾರ ಕರ‍್ಯಕ್ರಮದಲ್ಲಿ ಬಿ.ಎಸ್ ಯಡಿಯೂರಪ್ಪ ಅವರು  ಸರಕಾರದ ವಿವಿಧ ಯೋಜನೆಗಳ ಮೂಲಕ ಪ್ರಯೋಜನವನ್ನು ಪಡೆದ ವಿವಿಧ ಜಿಲ್ಲೆಗಳ ಫಲಾನುಭವಿಗಳೊಂದಿಗೆ ಹಾಗೂ ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಅವರ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್-19 ಗೆ  ಚಿಕಿತ್ಸೆ ಪಡೆದು ಗುಣಮುಖರಾದರಿಂದ ಸರ್ಕಾರದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ವೇಳೆಯಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಕಿರುಸಾಕ್ಷö್ಯ ಚಿತ್ರಣವನ್ನು ವೀಕ್ಷಿಸಲಾಯಿತು.

ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ , ಸರ್ಕಾರದ ಒಂದು ವರ್ಷದ ಸಾಧನೆಗಳನ್ನೊಳಗೊಂಡ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರ ತಂದಿರುವ ಕಿರುಹೊತ್ತಿಗೆ “ಸವಾಲುಗಳ ಒಂದು ವರ್ಷ- ಪರಿಹಾರದ ಸ್ಪರ್ಶ” ವನ್ನು ಶಾಸಕ ರಘುಪತಿ ಭಟ್, ಜನಪದ ವಿಶೇಷ ಸಂಚಿಕೆಯನ್ನು ಶಾಸಕ ಲಾಲಾಜಿ.ಆರ್.ಮೆಂಡನ್ ಹಾಗೂ ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಬಿಡುಗಡೆಗೊಳಿಸಿದರು.

ಮುಖ್ಯಮಂತ್ರಿಗಳ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಣೆಯಲ್ಲಿ,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ,  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾಧಿಕಾರಿ ಜಿ ಜಗದೀಶ್,  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್ , ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಉಡುಪಿ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಯ ನೆರವು ಪಡೆದ ಫಲಾನುಭವಿಗಳು ಹಾಗೂ ಕೋವಿಡ್-19 ನಿಂದ ಗುಣಮುಖರಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ಡಯಟ್ ನ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.