ಆಡಿಯೋ ವೈರಲ್ ಹಿಂದೆ ಜಿಹಾದಿಗಳ ಕೈವಾಡವಿದೆ: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಉಡುಪಿ: ಲಾಕ್ ಡೌನ್ ಆದ ಬಳಿಕ ನಾನು ಒಂದು ದಿನವೂ ವಿಶ್ರಾಂತಿ ಪಡೆಯದೆ ನನ್ನ ಕ್ಷೇತ್ರದ ಜನತೆಯ ಸೇವೆ ಮಾಡಿದ್ದಾನೆ. ಆದರೆ ಕೆಲ ಜಿಹಾದಿಗಳು ನನ್ನ ಹೆಸರು ಕೆಡಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರವಾಗಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಲಿಕೆಯ ಬಗ್ಗೆ ಮಾಹಿತಿ ಇಲ್ಲ ಎಂಬ ಸಂಸದೆ ಶೋಭಾ ಕರಂದ್ಲಾಜೆ ಧ್ವನಿವುಳ್ಳ ಆಡಿಯೋ ವೈರಲ್ ಆಗಿತ್ತು. ಇದಕ್ಕೆ ಇಂದು ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ ಅವರು, ಈ ಆಡಿಯೋ ವೈರಲ್ ಹಿಂದೆ ಜಿಹಾದಿಗಳ ಕೈವಾಡವಿದೆ. ಅವರು ನಿರಂತರವಾಗಿ ನನಗೆ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದಾರೆ. ಅಲ್ಲದೆ ಅವ್ಯಾಶ್ಚ ಶಬ್ದಗಳಿಂದ ನನನ್ನು ನಿಂದಿಸಿದ್ದಾರೆ ಎಂದು ದೂರಿದ್ದಾರೆ.
ಇತ್ತೀಚೆಗೆ ಮಸ್ಕತ್ ನಲ್ಲಿ ಕೇರಳದ ಹಿಂದೂ ಡ್ರೈವರ್ ಒಬ್ಬರಿಗೆ ಜಿಹಾದಿಗಳು ಕಪಾಲಮೋಕ್ಷ ಮಾಡಿದ್ದರು. ಇದರ ವಿರುದ್ದ ಸಿಡಿದೆದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದ್ದೆ. ಇದಕ್ಕೆ ನನಗೆ ನೂರಾರು ಬೆದರಿಕೆ ಕರೆಗಳು ಬಂದಿವೆ. ಹೀಗೆ ನೂರಾರು ಮಂದಿ ಕರೆ ಮಾಡಿ ಅನಾವಶ್ಯಕವಾಗಿ ಮಾತನಾಡುತ್ತಾರೆ. ನಿನ್ನೆ ಕೂಡ ಒಬ್ಬ ದುರುದ್ದೇಶದಿಂದ ಕರೆ ಮಾಡಿದ್ದ. ಅದಕ್ಕೆ ನಾನು ಗೊತ್ತಿಲ್ಲಪ್ಪ ಎಂದು ಉತ್ತರಿಸಿದ್ದೇನೆ. ಆದರೆ ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿದ್ದಾರೆ.
ನಾನು ನನ್ನ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್ ಡೌನ್ ನಲ್ಲಿ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಆದರೂ ನನ್ನ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಜನರೇ ಊಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.