ಮಾಜಿ ಸಚಿವ ಪ್ರಮೋದ್ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ: ಯಶ್ ಪಾಲ್ ಸುವರ್ಣ ಆರೋಪ

ಉಡುಪಿ: ಮೈತ್ರಿ ಅಭ್ಯರ್ಥಿಯಾಗಿರುವ ಪ್ರಮೋದ್‌ ಮಧ್ವರಾಜ್‌ ಅವರು ಹಿಂದೆ ಮೀನುಗಾರ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಮೇಲೆ ಮೀನುಗಾರರ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಮೀನುಗಾರರಿಗೆ ಸೌಲಭ್ಯಗಳನ್ನು ನೀಡುವ ಬದಲು ಈ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಯೋಜನೆಗಳನ್ನು ಮೀನುಗಾರರಿಂದ ಕಿತ್ತುಕೊಂಡರು. ಮೀನುಗಾರರ ಒಂದೇ ಒಂದು ಬೇಡಿಕೆಯನ್ನು ಈಡೇರಿಸದೆ ಮೀನುಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ಉಡುಪಿ–ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅವಧಿಯಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 400 ಮನೆಗಳಂತೆ ಪ್ರತಿಯೊಂದು ಮನೆಗಳಿಗೆ ಹಿಂದೆ ನೀಡುತ್ತಿದ್ದ ಸಹಾಯಧನವನ್ನು 40 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗಿತ್ತು. ಪ್ರಮೋದ್‌ ಅವರು ಈ ಯೋಜನೆಯನ್ನು ರಾಜೀವಗಾಂಧಿ ವಸತಿ ಯೋಜನೆಯಡಿ ವಿಲೀನಗೊಳಿಸುವ ಮೂಲಕ ಬಡಮೀನುಗಾರರು
ಮನೆಕಟ್ಟಿಕೊಳ್ಳುವಲ್ಲಿ ವಂಚಿತರನ್ನಾಗಿ ಮಾಡಿದರು. ಡೀಸೆಲ್‌ ಸಬ್ಸಿಡಿ ದರವನ್ನು ಹಿಂದೆ ನೇರವಾಗಿ ಮೀನುಗಾರರ ಕೈಗೆ ನೀಡಲಾಗುತ್ತಿತ್ತು. ಅದನ್ನು ಬ್ಯಾಂಕ್‌ ಖಾತೆಗೆ ಹಾಕುವ ಮೂಲಕ ಮೀನುಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು ಎಂದು ದೂರಿದರು. ಪ್ರಮೋದ್‌ ಮಧ್ವರಾಜ್‌ ಅವರು ಅಧಿಕಾರಾವಧಿಯಲ್ಲಿ ಮಾಡಿದ ಒಳ್ಳೆಯ ಕಾರ್ಯಗಳಿಗೆ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಜನತೆ ತಕ್ಕ ಪಾಠ ಕಲಿಸಿದ್ದಾರೆ.
ಹಿಂದೂ ಸಮಾಜದ ಪರ ಕೆಲಸ ಮಾಡಿಕೊಂಡು ಬರುತ್ತಿರುವ ಮೀನುಗಾರರು, ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಹ ಬಿಜೆಪಿಗೆ ಕರಾವಳಿ ಮೀನುಗಾರರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.  ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮೀನುಗಾರ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಪ್ರತ್ಯೇಕ ಮೀನುಗಾರಿಕಾ ಸಚಿವಾಲಯವನ್ನು ನೀಡುವ ಮೂಲಕ ಮೀನುಗಾರರ ಸಮುದಾಯದ ಅಭಿವೃದ್ಧಿಗೆ ನಾವು ಬದ್ಧ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ಅದೇ ರೀತಿಯಲ್ಲಿ ಈ ಬಾರಿಯ ಬಿಜೆಪಿ ಪ್ರಾಣಾಳಿಕೆಯಲ್ಲಿ ಮತ್ಸ್ಯಾಸಂಪಾದನಾ ಯೋಜನೆಯಡಿ ಮೀನುಗಾರರಿಗೆ ಹತ್ತು ಸಾವಿರ ಕೋಟಿ ಅನುದಾನ, ಕೋಲ್ಡ್‌ ಸ್ಟೋರೇಜ್‌–ಐಸ್‌ ಪ್ಲಾಂಟ್‌ಗಳನ್ನು ಸ್ಥಾಪಿಸಲು ಒತ್ತು ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಅನುದಾನ ಮೀಸಲಿಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ಮೀನುಗಾರರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಅಕ್ಟ್‌ ಕಲ್ಚರ್‌ ಯೋಜನೆ ಹಾಕಿಕೊಂಡಿದೆ. ಅಲಂಕಾರಿಕ ಮೀನುಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಇದೇ 15ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ 4 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾಗವಹಿಸುವರು. ಬಳಿಕ ಅವರು ಸಂಜೆ 5.15ಕ್ಕೆ ಮಲ್ಪೆಯ ವಡಾಬಂಡೇಶ್ವರದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಇದೇ 13ರಂದು ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ  ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 30ರಿಂದ 35 ಸಾವಿರ ಕಾರ್ಯಕರ್ತರು ಭಾಗವಹಿಸುವರು ಎಂದು ತಿಳಿಸಿದರು.
ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮುಖಂಡರಾದ ನಯನ ಗಣೇಶ್‌, ಶಶಿಕಾಂತ್‌ ಪಡುಬಿದ್ರಿ, ಸದಾನಂದ ಬಲ್ಕೂರ್, ಕುಯಿಲಾಡಿ ಸುರೇಶ್‌ ನಾಯಕ್‌, ಗಣಪತಿ ಶ್ರೀಯಾನ್‌, ದಿನಕರ ಬಾಬು ಇದ್ದರು.