ಕೇಂದ್ರದ ಯೋಜನೆಯನ್ನು ವಿಫಲಗೊಳಿಸಲು ರಾಜ್ಯ ಸರಕಾರದ ಷಡ್ಯಂತ್ರ: ಸಂಸದ ಕೋಟ ಆರೋಪ

ಉಡುಪಿ: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರೆಸಿದೆ. ಕೇಂದ್ರದ ಯೋಜನೆಯನ್ನು ವಿಫಲಗೊಳಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನೌಷಧಿ ಕೇಂದ್ರದಲ್ಲಿ ಜನ ವಾರ್ಷಿಕ 250 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ. ದೇಶದಲ್ಲಿ 2ಸಾವಿರ ಕೋಟಿ ವ್ಯವಹಾರ ಜನೌಷಧಿ ಕೇಂದ್ರದಲ್ಲಿ ನಡೆಯುತ್ತದೆ. ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ಸಿಗುತ್ತಿದೆ. ಶುಗರ್ ನ ₹95 ಮಾತ್ರೆ 5ರುಪಾಯಿಗೆ ಸಿಗುತ್ತದೆ. ಕ್ಯಾಲ್ಸಿಯಂ 10 ಮಾತ್ರೆಗೆ ರೂ.7 ಹೊರಗಡೆ 95 ರೂ. ಇದೆ. ಆದರೆ, ಸರಕಾರಿ ಆಸ್ಪತ್ರೆಯ ಆವರಣದೊಳಗೆ ಇರುವ ಜನೌಷಧ ಕೇಂದ್ರವನ್ನು ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ನೀವು ಉಚಿತವಾಗಿ ಕೊಟ್ಟರೆ ಜನ ಔಷಧಿ ಕೇಂದ್ರ ತನ್ನಷ್ಟಕ್ಕೆ ಮುಚ್ಚಲಿ. ನೀವಾಗಿ ಯಾಕೆ ಮುಚ್ಚುತ್ತೀರಿ? ಬಡ ರೋಗಿಗಳಿಗೆ ಬಹುದೊಡ್ಡ ಗಂಡಾಂತರ ಇದು ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಬಡ ರೋಗಿಗಳಿಗೆ ಕಿರುಕುಳ ಕೊಟ್ಟು ನಿಮ್ಮ ರಾಜಕೀಯಬೇಡ. ರಾಜ್ಯ ಸರ್ಕಾರ ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ರು.