ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರ ಸಂಸ್ಮರಣೆಯನ್ನು ಸರಳ ರೀತಿಯಲ್ಲಿ ಆಚರಿಸಿ: ಶಿರೂರು ಅಭಿಮಾನಿಗಳಿಗೆ ಕೇಮಾರು ಶ್ರೀ ಕರೆ 

ಉಡುಪಿ: ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರು ಕೃಷ್ಣೈಖ್ಯರಾಗಿ ಜುಲೈ19ರಂದು ಎರಡು ವರ್ಷ ತುಂಬಲಿದ್ದು, ಈ ಬಾರಿ ಶ್ರೀಪಾದರ ಸಂಸ್ಮರಣೆ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಯೋಜಿಸಬೇಕೆಂದು ಕೇಮಾರು ಸಾಂದೀಪನಿ ಮಠದ ಈಶವಿಠಲದಾಸ ಶ್ರೀಪಾದರು ಶಿರೂರು ಅಭಿಮಾನಿ ಹಾಗೂ ಭಕ್ತವೃಂದಕ್ಕೆ ಕರೆ ನೀಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು,ಉಡುಪಿ, ಸಿಮಂತೂರು,ಕೇಮಾರು ಸೇರಿದಂತೆ  ನಾಡಿನ ವಿವಿಧ ಸ್ಥಳಗಳಲ್ಲಿ ಶಿರೂರು ಶ್ರೀಪಾದರ ಜನ್ಮದಿನ ಹಾಗೂ ಸಂಸ್ಮರಣೆ ದಿನವನ್ನು ಶ್ರೀಪಾದರ ಆಪ್ತರಾದ ಕೇಮಾರು ಸ್ವಾಮೀಜಿಯವರ ನೇತೃತ್ವದಲ್ಲಿ ಭಕ್ತವೃಂದವು  ವಿವಿಧ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬಂದಿದೆ. ಆದರೆ ಈ ಬಾರಿ ಕೊರೊನಾ ಸಮಸ್ಯೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಶಿರೂರು ಶ್ರೀಪಾದರ ಸಂಸ್ಮರಣಾ ಕಾರ್ಯಕ್ರಮವನ್ನು ಶಿಷ್ಯ ಸಮುದಾಯ ಹಾಗೂ ಅಭಿಮಾನಿಗಳು ಸ್ವಗೃಹದಲ್ಲೇ ಸರಳವಾಗಿ ಆಚರಿಸಬೇಕು ಎಂದು ಕೇಮಾರು ಶ್ರೀಪಾದರು, ಶಿರೂರು ಶ್ರೀ
ಅಭಿಮಾನಿ ಬಳಗದ ರಾಧಾಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ, ಜಯರಾಂ ಅಂಬೇಕಲ್ಲು, ನವೀನ್ ರಾವ್, ಶಿಜಿತ್  ಹಾಗೂ ಶಿರೂರು ಶ್ರೀಪಾದರ  ಪೂರ್ವಾಶ್ರಮದ  ಸಹೋದರ ಪಿ. ಲಾತವ್ಯ ಆಚಾರ್ಯ ವಿನಂತಿಸಿಕೊಂಡಿದ್ದಾರೆ.