ಉಡುಪಿ: ಸಂತೆಕಟ್ಟೆಯ ಲಕ್ಷ್ಮೀನಗರ ರಸ್ತೆಯಲ್ಲಿ ವಾರದ ಹಿಂದೆ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹೆರ್ಗದ ಶೆಟ್ಟಿಬೆಟ್ಟು ನಿವಾಸಿ ಮೊಹಮ್ಮದ್ ಝದ್ (19) ಮೃತ ದುರ್ದೈವಿ. ಅಪಘಾತದ ಬಳಿಕ ಅವರನ್ನು ಉಡುಪಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ನಿಧನರಾದರು ಎಂದು ತಿಳಿದುಬಂದಿದೆ. ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಝದ್ ಶೀಘ್ರದಲ್ಲೇ ಗಲ್ಫ್ ರಾಷ್ಟ್ರಕ್ಕೆ ಉದ್ಯೋಗಕ್ಕಾಗಿ ತೆರಳಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಮೃತರು ತಂದೆ-ತಾಯಿ ಹಾಗೂ ಒಬ್ಬ ಸಹೋದರರನ್ನು ಅಗಲಿದ್ದಾರೆ.
















