ಉಡುಪಿ: ಜುಲೈ 25ರಂದು ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿ ಬಿಡುಗಡೆ

ಉಡುಪಿ: ಗುಜ್ಜಾಡಿ ಸ್ವರ್ಣ ಜುವೆಲರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ದಿ. ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವ ವರ್ಷದ ಅಂಗವಾಗಿ ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿಯ ಬಿಡುಗಡೆ ಸಮಾರಂಭ ಜುಲೈ 25ರಂದು ಬೆಳಿಗ್ಗೆ 10.30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಲೆಕ್ಕಪರಿಶೋಧಕ ಕೆ. ಉಲ್ಲಾಸ್ ಕಾಮತ್, ವಿಎಚ್ ಪಿಯ ಎಂ.ಎನ್. ನಾಗರಾಜ್ ಹಾಗೂ ಎಒಜೆ ಮುಖ್ಯ ಸಂಪಾದಕ ಸುಮೇಶ್ ವಾಧೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಈ ಕೃತಿಯು ಉದಯವಾಣಿಯ ಮಾಜಿ ಉಪಸಂಪಾದಕ ಸತೀಶ್ ಮಲ್ಯ ಅವರು ದಿ. ನರಸಿಂಹ ನಾಯಕ್ ಅವರೊಂದಿಗೆ ನಡೆಸಿದ ವಿಸ್ತೃತ ಸಂದರ್ಶನಗಳನ್ನು ಆಧರಿಸಿ ಆತ್ಮಕಥನ ರೂಪದಲ್ಲಿ ಸಂಪಾದಿಸಲಾಗಿದೆ. ಪುಸ್ತಕದಲ್ಲಿ ಅವರ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನ, ವ್ಯಾಪಾರ ಜೀವನ ಮತ್ತು ಸಾಮಾಜಿಕ ಬದುಕಿನ ಕುರಿತು ಮೂರು ವಿಭಾಗಗಳಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.

ತೀವ್ರ ಬಡತನದಿಂದ ಆರಂಭಿಸಿ ಪ್ರಾಮಾಣಿಕತೆ ಹಾಗೂ ಜನರ ವಿಶ್ವಾಸದ ಆಧಾರದ ಮೇಲೆ ಯಶಸ್ವಿ ಉದ್ಯಮಿಯಾಗಿ ಬೆಳೆದ ಅವರ ಬದುಕಿನ ಪಯಣ, ಸಮಾಜಸೇವೆ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್ ಹಾಗೂ ಜನಸಂಘ–ಬಿಜೆಪಿಯೊಂದಿಗೆ ಹೊಂದಿದ್ದ ನಂಟು, ರಾಜಕೀಯ ಮತ್ತು ಜೀವನ ಮೌಲ್ಯಗಳು, ಕುಟುಂಬದ ಒಗ್ಗಟ್ಟಿಗೆ ನೀಡಿದ ಆದ್ಯತೆ ಸೇರಿದಂತೆ ಹಲವು ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವರ್ಣ ಜುವೆಲರ್ಸ್ ನ ರಮಾದಾಸ್ ನಾಯಕ್, ರಘುವೀರ್ ನಾಯಕ್, ದೀಪಕ್, ಅಭಯ್ ಇದ್ದರು.