ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದಿಂದ ತನ್ನನ್ನು ಏಕಾಏಕಿಯಾಗಿ ಬದಲಾವಣೆ ಮಾಡಿರುವುದಕ್ಕೆ ಕಿಶೋರ್ ಕುಮಾರ್ ಕುಂದಾಪುರ ಅಸಮಾಧಾನ ಹೊರಹಾಕಿದ್ದಾರೆ. ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠರ ನಿರ್ಧಾರದ ವಿರುದ್ಧ ಗುಡುಗಿದರು.
ಪಕ್ಷ ಏನೆಲ್ಲ ಜವಾಬ್ದಾರಿಗಳನ್ನು ನನಗೆ ಕೊಟ್ಟಿದೆಯೋ ಅದನ್ನು ನನ್ನ ಎಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ನಾನು ಪಕ್ಷದ ಹೆಸರಲ್ಲಿ ಯಾವುದೇ ಹಣ ವಸೂಲಿ ಮಾಡಿಲ್ಲ. ರಾಜ್ಯಕ್ಕೆ ಯಾವುದೇ ಸುಳ್ಳು ವರದಿ ಕಳುಹಿಸಿಲ್ಲ. ಆದರೆ ನನ್ನಿಂದ ಏನೂ ತೊಂದರೆ ಆಯ್ತು ಅಂತಾ ಗೊತ್ತಿಲ್ಲ. ನಾನು ಕಾರ್ಯಕರ್ತರ ಮಧ್ಯೆ ಇದ್ದು ಬೆಳೆದು ಬಂದವನು. ಯಾವುದೇ ನಾಯಕರ ಹಿಂಬಾಲಕರಾಗಿ ಇದ್ದುಕೊಂಡು ಬಂದವನಲ್ಲ ಎಂದು ನಿರ್ಗಮಿತ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ನನ್ನಿಂದ ಈಗಾಗಲೇ ಅಧಿಕಾರವನ್ನು ಕಸಿದುಕೊಂಡಿದ್ದಾರೆ. ನನ್ನಲ್ಲಿ ಅಧಿಕಾರ ಇಲ್ಲದಿದ್ದಾಗ ಅದನ್ನು ಹಸ್ತಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ನಾನು ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ರಾಜಕಾರಣ ಬಿಟ್ಟು ಪ್ರಪಂಚ ದೊಡ್ಡದಿದೆ. ನಾನು ಹೇಗೆ ಬೆಳೆಯಬೇಕೆಂದು ನನಗೆ ಗೊತ್ತು, ಪಕ್ಷ ನೀಡಿದ ಅವಕಾಶಕ್ಕೆ ಋಣಿಯಾಗಿರುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.ಬಳಿಕ ಸನ್ಮಾನ ಸ್ವೀಕರಿಸದೆ, ಪಕ್ಷದ ಶಾಲನ್ನು ವೇದಿಕೆಯಲ್ಲೇ ಬಿಟ್ಟು ಪಕ್ಷದ ನಿರ್ಧಾರದ ವಿರುದ್ಧ ಬೇಸರದಿಂದಲೇ ವೇದಿಕೆಯಿಂದ ಹೊರನಡೆದರು.












