“ಶ್ರೀಮನ್ನಾರಾಯಣ” ಚಿತ್ರ ತಂಡ ಉಡುಪಿ ಕಲ್ಪನ ಚಿತ್ರಮಂದಿರಕ್ಕೆ ಭೇಟಿ

ಉಡುಪಿ: ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅವನೇ ಶ್ರೀಮನ್‌ನಾರಾಯಣ ಚಿತ್ರತಂಡ ನಗರದ ಕಲ್ಪನ ಚಿತ್ರಮಂದಿರಕ್ಕೆ ಸೋಮವಾರ ಭೇಟಿ ನೀಡಿತು.
ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿದ ನಟ ರಕ್ಷಿತ್‌ ಶೆಟ್ಟಿ, ಚಿತ್ರವು ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಲಯಾಳಂ, ತಮಿಳು ಹಾಗೂ ತೆಲುಗು ವರ್ಷನ್‌ಗೆ ಉತ್ತಮ ಪ್ರಶಂಸೆ ದೊರಕಿದೆ ಎಂದರು. ಚಿತ್ರದ ಹಿಂದಿ ವರ್ಷನ್‌ ಬಿಡುಗಡೆಗೆ ಇನ್ನೂ ದಿನಾಂಕ ಅಂತಿಮವಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುತ್ತದೆ. ಹಿಂದಿಯಲ್ಲಿ ಬಿಡುಗಡೆಗೆ ಬೇಡಿಕೆ ಹೆಚ್ಚಿದ್ದು, ಶೀಘ್ರ ಬಿಡುಗಡೆಗೆ ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.
ಉಡುಪಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ನನ್ನ ಮುಂದಿನ ಚಿತ್ರ ಪುಣ್ಯಕೋಟಿ ಸಹ ಕೊಂಚ ಫ್ಯಾಂಟಸಿ ಫಿಕ್ಷನ್‌ ಕಾನ್ಸೆಪ್ಟ್‌ನಲ್ಲಿ ಮೂಡಿಬರಲಿದೆ ಎಂದರು.
ಚಿತ್ರ ನಿರ್ದೇಶಕ ಸಚಿನ್‌ ಮಾತನಾಡಿ, ನಿರ್ದೇಶಕನಾಗಿ ನನ್ನ ಮೊದಲ ಚಿತ್ರವಾಗಿದ್ದು, ಮೊದಲ ಚಿತ್ರವೇ ಯಶಸ್ವಿ ತಂದುಕೊಟ್ಟಿದ್ದು ಖುಷಿಯಾಗಿದೆ ಎಂದರು.
ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್‌, ನಟರಾದ ಬಾಲಾಜಿ ಮನೋಹರ್‌, ಪ್ರಮೋದ್‌ ಶೆಟ್ಟಿ ಇದ್ದರು.