ಉಡುಪಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

ಉಡುಪಿ: ಉಡುಪಿ ಹೊರವಲಯದ ಕೊಡವೂರು ಗ್ರಾಮದ ಪಾದರಾಯಣ ಆಚಾರ್ಯರ ಸ್ಮಾರಕಾರ್ಥ ತಂಗುದಾಣ ಮೂಡುಬೆಟ್ಟು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದು, ಆತನಿಂದ ₹35 ಸಾವಿರೌಲ್ಯದ 1.204 ಕಿ.ಲೋ. ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಗೌತಮ (ಬುದ್ಧ) ಎಂದು ಗುರುತಿಸಲಾಗಿದೆ. ಈತ 2ನೇ ಆರೋಪಿ ಪ್ರಣಮ್ ಎಂಬಾತನಿಂದ ಗಾಂಜಾ ಪಡೆದು ಆತನ ಆದೇಶದ ಮೇರೆಗೆ ಮೂಡುಬೆಟ್ಟು ಬಸ್ ನಿಲ್ದಾಣದ ಬಳಿ ಗಿರಾಕಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನು.

ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.