ಆಹಾರ ಹಂಚುವಿಕೆಗೆ ಅನುಮತಿ ಅಗತ್ಯ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಏ.5: ಕೋವಿಡ್-2019 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದ್ದು,  ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ನಾಗರೀಕರ ಸಂಚಾರವನ್ನು ನಿರ್ಭಂಧಿಸಿ ಆದೇಶವನ್ನು ಹೊರಡಿಸಲಾಗಿದೆ.  ಕೆಲವೊಂದು ವ್ಯಕ್ತಿಗಳು, ಸಂಸ್ಥೆಗಳು ನಗರಸಭೆ, ಪುರಸಭೆ, ಪಟ್ಪಣ ಪಂಚಾಯತ್, ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ ಮತ್ತು ಅದರಿಂದ ಹೊರಗಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಪಡೆಯದೇ  ತಯಾರಿಸಿದ ಆಹಾರ ಪೊಟ್ಟಣಗಳನ್ನು ಬೀದಿಯಲ್ಲಿ, ಮನೆ ಮನೆಗೆ ವಿತರಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ವಿತರಣೆ ಸಂಧರ್ಭದಲ್ಲಿ 5 ಕ್ಕಿಂತ ಜಾಸ್ತಿ ಜನರು ಗುಂಪು ಗುಂಪಾಗಿ, ಒಟ್ಟಾಗಿ ಸೇರಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ ವಿತರಿಸುತ್ತಿದ್ದಾರೆ.  ಅಲ್ಲದೆ  ಒಂದು ಊರಿನಿಂದ ಇನ್ನೊಂದು ಊರಿಗೆ ವಾಹನದಲ್ಲಿ ಗುಂಪಾಗಿ ತೆರಳಿ ಯಾವುದೇ ಸಾಮಾಜಿಕ ಅಂತರ ಹಾಗೂ ಲಾಕ್ ಡೌನ್‌ನ ನಿಯಮಗಳನ್ನು ಪಾಲನೆ ಮಾಡದೇ ಆಹಾರ ಪೊಟ್ಟಣಗಳನ್ನು ಹಂಚುತ್ತಿರುವ ಬಗ್ಗೆ ಅನೇಕ ದೂರುಗಳು ಸ್ವೀಕೃತವಾಗುತ್ತಿವೆ.   ಇದರಿಂದಾಗಿ   ಲಾಕ್‌ಡೌನ್ ನಿಷೇಧಾಜ್ಞೆಯ ಉಲ್ಲಂಘನೆಯಾಗುತ್ತದೆ ಅಲ್ಲದೇ ಲಾಕ್‌ಡೌನ್ ನ ಮೂಲ ಉದ್ದೇಶವೇ ಬುಡಮೇಲಾಗುತ್ತದೆ ಹಾಗೂ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಇಂತಹ ವಿಪತ್ತಿನ ಸಮಯದಲ್ಲಿ ಜಿಲ್ಲೆಯ  ಪ್ರಜ್ಞಾವಂತ ನಾಗರಿಕರು ಸಂಘ ಸಂಸ್ಥೆಗಳು ನಿಯಮಗಳನ್ನು ಪಾಲಿಸಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಇಂತಹ ವ್ಯವಸ್ಥೆಯಿಂದ  ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾಗಿದ್ದು,  ಸಾರ್ವಜನಿಕ  ಹಿತದೃಷ್ಟಿಯಿಂದ ಈ ಚಟುವಟಿಕೆಗಳಲ್ಲಿ ಏಕರೂಪತೆಯನ್ನು ಹಾಗೂ ಶಿಸ್ತನ್ನು ತರುವುದು ಅವಶ್ಯಕವಾಗಿದೆ.

ಆದುದರಿಂದ, ಬೇಯಿಸಿ ತಯಾರಿಸಿದ ಆಹಾರ  ಪೊಟ್ಟಣಗಳನ್ನು ವಿತರಿಸಲು ಇಚ್ಚಿಸುವ  ವ್ಯಕ್ತಿಗಳು/ಸಂಘ ಸಂಸ್ಥೆಗಳು

ಸಂಬಂಧಪಟ್ಟ ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿ ಪಡೆದಿರತಕ್ಕದ್ದು, ಹೀಗೆ ಅನುಮತಿ ಪಡೆಯುವ ಪೂರ್ವದಲ್ಲಿ  ಅವರು ತಯಾರಿಸುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಶುಚಿತ್ವದ ಬಗ್ಗೆ ಕಡ್ಡಾಯವಾಗಿ ತಾಲೂಕು ಆರೋಗ್ಯ ಇಲಾಖೆಯಿಂದ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಯವರಿಂದ ಪರೀಕ್ಷೆಗೆ ಒಳಪಡಿಸತಕ್ದದ್ದು.   ತಾಲೂಕು ಆರೋಗ್ಯಾಧಿಕಾರಿಗಳಿಂದ ಈ ಉದ್ದೇಶಕ್ಕೆ ನಿಯೋಜಿತರಾದವರು ಈ ಕೆಳಗಿನ ಅಂಶಗಳ ಪರಿಶೀಲನೆ ನಡೆಸತಕ್ಕದ್ದು. 1) ಆಹಾರ ತಯಾರಿಸುವ ಸ್ಥಳದಲ್ಲಿನ ಶುಚಿತ್ವ, ಸ್ವಚ್ಚತೆ.   2)  ಆಹಾರ ತಯಾರಿಸುವಲ್ಲಿ ಇರುವ ಸ್ಥಳವಕಾಶ ಹಾಗೂ ಸಾಮಾಜಿಕ ಅಂತರ ಕಾಪಾಡುವಿಕೆ   3) ಆಹಾರ ತಯಾರಿಸುವ ಸ್ಥಳದಲ್ಲಿನ ಕಂಡೀಷನ್.  4) ಆಹಾರ ತಯಾರಿಕಾ ಸಿಬ್ಬಂದಿ, ಜನರ ವೈಯಕ್ತಿಕ ಆರೋಗ್ಯ ಸ್ಥಿತಿ    5) ಆಹಾರ ತಯಾರಿಸುವ ಸ್ಥಳದ ಪರಿಸರದಲ್ಲಿ ಸ್ವಚ್ಚತೆ, ಶುಚಿತ್ವ  6) ಆಹಾರ ಸಮಾಗ್ರಿಗಳ ಪ್ಯಾಕೇಜಿಂಗ್ ವಿಧಾನ ಹಾಗೂ ಸಾಗಾಟದ ವ್ಯವಸ್ಥೆ ಆರೋಗ್ಯಕರ, ಸಮರ್ಪಕವಾಗಿದೆಯೇ?    7) ಆಹಾರ ತಯಾರಿಕೆಗೆ ಗುಣಮಟ್ಟದ ಆಹಾರ ಧಾನ್ಯ, ವಸ್ತುಗಳನ್ನು ಬಳಸುತ್ತಿದ್ದಾರೆ.

ಆಹಾರ ವಿತರಿಸುವವರು ತಮ್ಮ ನಗರಸಭೆ/ ಪುರಸಭೆ /ಪಟ್ಪಣ ಪಂಚಾಯತ್/ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಮಾತ್ರ ವಿತರಿಸತಕ್ಕದ್ದು. ತಮ್ಮ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗೆ ಬೇಯಿಸಿದ ಆಹಾರವನ್ನು ವಿತರಿಸುವಂತಿಲ್ಲ.   ಮೇಲ್ಕಾಣಿಸಿದ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿ ಬೇಯಿಸಿದ ಆಹಾರ ಪದಾರ್ಥಗಳನ್ನು ವಿತರಿಸಿದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಈ ನಿರ್ದೇಶನಗಳನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿಯಾ ಸಂಘ ಸಂಸ್ಥೆಗಳ ಮೇಲೆ  ಕಾನೂನು ಕ್ರಮ  ಕೈಗೊಳ್ಳಲು  ಪೊಲೀಸ್ ಇಲಾಖೆಗೆ ಪ್ರಕರಣಗಳನ್ನು ದಾಖಲಿಸಲು  ದೂರನ್ನು ನೀಡುವ ಅಧಿಕಾರವನ್ನು  ಆಯಾ ತಹಶೀಲ್ದಾರರಿಗೆ / ನಗರಸಭಾ ಆಯುಕ್ತರು, ಮುಖ್ಯಾಧಿಕಾರಿ ಪುರಸಭೆ, ಪಟ್ಪಣ ಪಂಚಾಯತ್ ಮತ್ತು ಗ್ರಾಮ ಪಂಚಾಯತ್  ವ್ಯಾಪ್ತಿಗೆ  ಸಂಬಂಧಪಟ್ಟಂತೆ  ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ  ಪ್ರತ್ಯಾಯೋಜಿಸಿದೆ.    ಸಂದರ್ಭಾನುಸಾರ ಈ ಅಧಿಕಾರವನ್ನು ಯಾವ ಅಧಿಕಾರಿಯು ಉಲ್ಲಂಘನೆಯನ್ನು ಪತ್ತೆ ಹಚ್ಚುತ್ತಾರೋ ಅವರು ಬಳಸತಕ್ಕದ್ದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.