ಹೊರ ರಾಜ್ಯಗಳಿಗೆ ತೆರಳಲು ನೊಂದಾಯಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ

ಉಡುಪಿ, ಮೇ 1: ಕೊರೋನಾ ವೈರಸ್  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ. ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದ್ದು, ಈಗಾಗಲೇ ಹಲವಾರು ಅಗತ್ಯ  ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ,  ಜಿಲ್ಲೆಯಲ್ಲಿ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಲಾಕ್‌ಡೌನ್ ಕಾರಣದಿಂದಾಗಿ ಅವರ ಸ್ವಂತ  ರಾಜ್ಯಗಳಿಗೆ ತೆರಳಲು ಸಾಧ್ಯವಾಗದೇ ಇಲ್ಲಿಯೇ ಉಳಿದಿದ್ದು, ಅಂತಹವರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸ್ತವ್ಯ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಯಾತ್ರಿಕರು ,ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳನ್ನು ಅವರವರ ರಾಜ್ಯಗಳಿಗೆ ವ್ಯವಸ್ಥಿತವಾಗಿ ಕಳುಹಿಸಿಕೊಡುವ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಇಂತಹವರ ಮಾಹಿತಿಯನ್ನು ನಮೂದಿಸುವ ಬಗ್ಗೆ ಜಿಲ್ಲಾ ವೆಬ್‌ಸೈಟ್ https://udupi.nic.in ರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.  ಆದುದರಿಂದ ಉಡುಪಿ ಜಿಲ್ಲೆಯಿಂದ ತಮ್ಮ ರಾಜ್ಯಗಳಿಗೆ ಪ್ರಯಾಣಿಸಲು ಇಚ್ಛಿಸುವವರು ನಿಗಧಿತ ನಮೂನೆಯಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬಹುದಾಗಿದೆ.

ಈ ಬಗ್ಗೆ ಯಾವುದಾದರೂ ಮಾಹಿತಿ, ಸಹಾಯ ಬೇಕಾಗಿದ್ದಲ್ಲಿ, ನಾಗರಾಜ್ ರಾವ್, ಜಿಲ್ಲಾ ಅಂಕಿ ಸಂಖ್ಯಾ ಸಂಗ್ರಹಣಾಧಿಕಾರಿ ಮೊ: 9880278233 ಅಥವಾ ಟೋಲ್ ಪ್ರೀ ನಂ: 1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.