ಉಡುಪಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ (ಪಿಎಂ ಜನ್ಮನ್) ಯೋಜನೆ ಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯದ (ಪಿಜಿವಿಟಿ) ಅಭಿವೃದ್ಧಿ ಗಾಗಿ ಉಡುಪಿ ಜಿಲ್ಲೆಗೆ ಒಟ್ಟು 18 ವಿವಿಧೋದ್ದೇಶ ಕೇಂದ್ರಗಳು (ಎಂಪಿಸಿ) ಮಂಜೂರಾಗಿವೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇವುಗಳಲ್ಲಿ ಮೂರು ಕೇಂದ್ರಗಳನ್ನು ಈಗಾಗಲೇ ಕುಂದಾಪುರ ತಾಲೂಕಿನ ಹಾಲಾಡಿ ಬತ್ತುಗುಳಿ, ಹಾರ್ದಳ್ಳಿ ಮಂಡಳ್ಳಿ ಹಾಗೂ ಬೈಂದೂರು ತಾಲೂಕಿನ ಕೆರಾಡಿಯಲ್ಲಿ ಸ್ಥಾಪಿಸಲಾಗುತಿದ್ದು, ಇವುಗಳ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಕಾರ್ಕಳದ ಸಚ್ಚೇರಿಪೇಟೆಯಲ್ಲಿ ಇನ್ನೊಂದು ಕೇಂದ್ರದ ಕಾಮಗಾರಿ ಪ್ರಾರಂಭಗೊಳ್ಳಬೇಕಿದೆ ಎಂದು ಅವರು ವಿವರಿಸಿದ್ದಾರೆ.ಇನ್ನು ಮೂರು ಎಂಪಿಸಿ ಕೇಂದ್ರಗಳ ಅಂದಾಜು ಪಟ್ಟಿ ತಯಾರಿಕೆಯ ಹಂತದಲ್ಲಿದ್ದು, 9 ಕೇಂದ್ರಗಳಿಗೆ ಈಗಾಗಲೇ ಜಮೀನು ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿದೆ. 2 ಕೇಂದ್ರಗಳಿಗೆ ನಿವೇಶನ ಗುರುತಿಸಲು ಬಾಕಿ ಇದೆ. ಪ್ರತಿ ವಿವಿಧೋದ್ದೇಶ ಕೇಂದ್ರದ ಘಟಕ ವೆಚ್ಚ 60 ಲಕ್ಷ ರೂ. ಗಳಾಗಿವೆ ಎಂದು ಕೋಟ ತಿಳಿಸಿದ್ದಾರೆ.
ಪ್ರತಿಯೊಂದು ಕೇಂದ್ರದಲ್ಲಿ ಪರಿಶಿಷ್ಟ ಪಂಗಡದ (ಜಿಲ್ಲೆಯಲ್ಲಿ ಕೊರಗ) ಜನಾಂಗದವರಿಗೆ ಆರೋಗ್ಯ ಸೌಲಭ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ವಿವಿಧ ಕೌಶಲ್ಯಾಧಾರಿತ ಸಾಮಾಜಿಕ ಸೌಲಭ್ಯಗಳನ್ನು ನೀಡುವ ಮೂಲಕ ಜಿಲ್ಲೆಯ ಆದಿವಾಸಿ ಕೊರಗ ಬುಡಕಟ್ಟು ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಒಂದೇ ಸೂರಿನಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ಕೊರಗ ಜನಾಂಗದವರು ವಾಸಿಸುವ ಕಾಲೋನಿಗಳಲ್ಲಿ ಇವುಗಳನ್ನು ಒದಗಿಸಿ ಅವರನ್ನು ಸಮಾಜದಲ್ಲಿ ಮುಂಚೂಣಿಗೆ ತರುವ ಉದ್ದೇಶ ಯೋಜನೆಯ ದ್ದಾಗಿದೆ. ಇದರಿಂದ ಉಡುಪಿ ಜಿಲ್ಲೆಯ ಸುಮಾರು 18 ಕೇಂದ್ರಗಳಲ್ಲಿ ಪರಿಶಿಷ್ಟ ಪಂಗಡದ ಆದಿವಾಸಿ ಕೊರಗ ಜನಾಂಗದವರು ಈ ಸೌಲಭ್ಯವನ್ನು ಪಡೆಯಲಿ ದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.












