ಅಸ್ಸಾಂ-ಅರುಣಾಚಲ ಗಡಿಯಲ್ಲಿ ಗುಂಡಿನ ದಾಳಿ ಇಬ್ಬರಿಗೆ ಗಾಯ ಇಬ್ಬರು ಸಾವು

ಗುವಾಹಟಿ: ಅಸ್ಸಾಂ-ಅರುಣಾಚಲಪ್ರದೇಶದ ಗಡಿಯ ಪನ್ಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ.
ಧೇಮಾಜಿಯ ಹಲವು ಪ್ರದೇಶಗಳಲ್ಲಿ ಇದುವರೆಗೆ ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ನಡುವಿನ ಗಡಿಯನ್ನು ಗುರುತಿಸಿಲ್ಲ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.

”ಸಾಮಾನ್ಯವಾಗಿ, ನೆರೆಯ ರಾಜ್ಯ ನಮ್ಮ ಮೇಲೆ ಯಾವುದೇ ದಾಳಿ ಮಾಡುತ್ತಿಲ್ಲ. ಆದರೆ, ನೆರೆಯ ರಾಜ್ಯದ ಕೆಲವರು ಭೂಮಿ ವಶಪಡಿಸಿಕೊಳ್ಳುವ ದುರಾಸೆಯಿಂದ ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ದೇಮಾಜಿ ಪೊಲೀಸ್ ಅಧೀಕ್ಷಕ ಹಾಗೂ ಉಪ ಆಯುಕ್ತ ಈ ವಿಷಯ ನೋಡಿಕೊಳ್ಳಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಧೇಮಾಜಿ ಶಾಸಕ ರನೋಜ್ ಪೆಗು ತನ್ನ ಟ್ವಿಟರ್ ನಲ್ಲಿ, ಮೃತಪಟ್ಟವರನ್ನು ಬೋರ್ಬಿಲಾ ಚುಟಿಯಾಕರಿ ಗ್ರಾಮದ ನಿವಾಸಿ ಬೊಗಾ ಚುಟಿಯಾ ಹಾಗೂ ಮೊನಿಟು ಗೋಗಿ ಎಂದು ಗುರುತಿಸಿದ್ದಾರೆ. ಗಾಯಗೊಂಡವರನ್ನು ಪುಷ್ಪ ಗೊಗೋಯಿ ಹಾಗೂ ಅಕೋನಿ ಗೋಹೈನ್ ಎಂದು ಗುರುತಿಸಿದ್ದಾರೆ.