ಉಡುಪಿಯ ಕುವರಿಯರಿಬ್ಬರಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮೋದಿ ಜೊತೆ ಪಾಲ್ಗೊಳ್ಳುವ ಯೋಗ

ಉಡುಪಿ: ಜೂನ್ 21 ರಂದು ಮೈಸೂರು ಅರಮನೆ ಮೈದಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿಯ ಶಿವಾನಿ ಶೆಟ್ಟಿ ಮತ್ತು ಕಾರ್ಕಳದ ಅನ್ವಿ ಎಚ್ ಅಂಚನ್ ತಾವೂ ಕೂಡಾ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಶಿವಾನಂದ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಯ ಪುತ್ರಿ ಶಿವಾನಿ ಶೆಟ್ಟಿ, ಉಡುಪಿ ವಿದ್ಯೋದಯ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಆಗಿದ್ದರೆ, ಹರೀಶ್ ಅಂಚನ್ ಮತ್ತು ಶೋಭಾ ಅಂಚನ್ ದಂಪತಿಯ ಪುತ್ರಿ ಅನ್ವಿ ಎಚ್, ಕಾರ್ಕಳದ ರವಿ ಶಂಕರ ವಿದ್ಯಾಮಂದಿರದಲ್ಲಿ ಏಳನೇ ತರಗತಿ ಓದುತ್ತಿದ್ದಾರೆ.

ಯೋಗ ದಿನಕ್ಕಾಗಿ ನಡೆದ ಪೂರ್ವಭಾವಿ ಪ್ರದರ್ಶನ ತಯಾರಿಯಲ್ಲಿ ಇವರು ಭಾಗವಸಿದ್ದು, ಪಾಲ್ಗೊಳ್ಳುವವರ ಪೈಕಿ ಶಿವಾನಿ ಅತಿ ಚಿಕ್ಕ ವಯಸ್ಸಿನವಳಾಗಿದ್ದಾಳೆ. ಈಕೆಗೆ ಕೋವಿಡ್ ಲಸಿಕೆ ನೀಡಿರಲಿಲ್ಲವಾದ್ದರಿಂದ ಈಕೆಯ ಭಾಗವಹಿಸುವಿಕೆಯನ್ನು ತಡೆಹಿಡಿಯಲಾಗಿದ್ದು, ಆದರೆ ಶುಕ್ರವಾರ ಅಧಿಕೃತ ಮಾಹಿತಿ ಬಂದ ಹಿನ್ನೆಲೆಯಲ್ಲಿ 72 ಗಂಟೆಗಳ ಪೂರ್ವದ ಕೋವಿಡ್ ನೆಗೆಟಿವ್ ವರದಿಯ ಆಧಾರದಲ್ಲಿ ಆಕೆಗೆ ಪಾಲ್ಗೊಳ್ಳುವಂತೆ ಅವಕಾಶ ನೀಡಲಾಗಿದೆ.