ತಂದೆ ಬುದ್ದಿವಾದ ಹೇಳಿದ್ದಕ್ಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ!

ತುಮಕೂರು: ಶಾಲೆಗೆ ತಪ್ಪದೇ ಹೋಗು, ಚೆನ್ನಾಗಿ ಓದುಬರಹ ಕಲಿ ಎಂದು ತಂದೆ ಬುದ್ದಿವಾದ ಹೇಳಿದ್ದಕ್ಕೆ ಬಾಲಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತಮಯ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಚೆನ್ನಕಾಟಯ್ಯನ ಗುಡ್ಲು ಗ್ರಾಮದಲ್ಲಿ ಜಗದೀಶ್ (14) ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಗದೀಶ್ ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕನ ತಾಯಿಯ ಕುಟುಂಬ ಅಯ್ಯಪ್ಪ ಮಾಲೆ ಹಾಕಿದ್ದರು. ಈ ಸಂಬಂಧ ಅಲ್ಲಿಗೆ ಹೋಗಿ ಜಗದೀಶ್ ವಾಪಸ್ ಬಂದಿದ್ದ. ನಂತರ ಶಾಲೆಗೆ ಹೋಗಲು ನಿರಾಕರಿಸಿದ್ದ. ಇದರಿಂದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಶಾಲೆಗೆ ತೆರಳಿದ್ದ ಬಾಲಕ ಗೆಳೆಯನ ಜೊತೆಗೆ ಮನೆಗೆ ವಾಪಸ್ ಬರುವಾಗ ಗೆಳೆಯನನ್ನು ಕಳಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.