ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ: ವಿವಿಧ ಗೋಷ್ಠಿಗಳಿಗೆ ಚಾಲನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ತುಳು ಶಿವಳ್ಳಿ ಸಮಾಜ ಅಂದು-ಇಂದು-ಮುಂದು ಸಮಾವೇಶದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು,ಹಿಂದಿನ  ಹಿರಿಯರಿಂದ ಇಂದಿನ ಕಿರಿಯರವರೆಗಿನ ಆಹಾರ ಪದ್ದತಿ,ಜೀವನ ಪದ್ದತಿ,ಗುರು ಮಠಗಳ ನಡುವೆ ಇಟ್ಟುಕೊಂಡಿರುವ  ಸಂಭಂದಗಳ ರೀತಿ, ಸಮಾಜದಲ್ಲಿ ತೊಡಗಿಸಿ ಕೊಳ್ಳುವ ರೀತಿಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಉಡುಪಿಯ ಶ್ರೀಪತಿ ತಂತ್ರಿ,ರವೀಶ್ ತಂತ್ರಿ ಕುಂಟಾರ್,ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ,ತು.ಶಿ.ಮ.ಮ ದ ಅಧ್ಯಕ್ಷರಾದ ಅರವಿಂದ ಆಚಾರ್,ಉಜಿರೆಯ ಡಾ.ದಯಾಕರ್ ಎಂ.ಎಂ, ಪುತ್ತೂರಿನ ಹರೀಶ್ ಪುತ್ತೂರಾಯ,ಉಡುಪಿಯ ಪ್ರದೀಪ್ ಕುಮಾರ್  ಅಭಿಪ್ರಾಯವನ್ನು ಮಂಡಿಸಿದರು.

 

ವಿದ್ಯಾವಾಚಸ್ಪತಿ ಬನ್ನಂಜೆ ಡಾ.ಗೋವಿಂದ ಆಚಾರ್ಯ  ಇವರು ಭಾಗವಹಿಸಿ ವಿಶ್ವಕ್ಕೆ ಶ್ರೇಷ್ಠ ತತ್ವ ಜ್ಞಾನದ ವಿಶೇಷ ಕೊಡುಗೆ ನೀಡಿದ ಆಚಾರ್ಯ ಮಧ್ವರು ನಮ್ಮ ತುಳು ಶಿವಳ್ಳಿ ಬ್ರಾಹ್ಮಣ ಸಮಾಜದವರು.ಆಕಾಶದಲ್ಲಿ ನಮ್ಮ ಕಣ್ಣಿಗೆ ಕಾಣದ ನೀಲ ವರ್ಣದ ಪರದೆ (ಅಲ್ಟ್ರ ವೈಲೆಟ್) ಇದೆ,ಪರಮಾಣುವನ್ನು ವಿಭಾಗ ಮಾಡಬಹುದೆಂಬ ಎರಡು ವಿಷಯಗಳನ್ನು   800 ವರ್ಷಗಳ ಹಿಂದೆಯೇ ಆಚಾರ್ಯ ಮದ್ವರು ತಿಳಿಸಿದ್ದರು  ಎಂದು ಹೇಳಿದರು.

ಯುವ ವಿಭಾಗದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಉಜಿರೆಯ ಶರತ್ ಕೃಷ್ಣ ಪಡುವೆಟ್ನಾಯ ಇವರು ನಮ್ಮ ಸಮಾಜಬಾಂಧವರು ತಮ್ಮಊರಿನ ಪುಣ್ಯಕ್ಷೇತ್ರದ ಮಹಿಮೆಯನ್ನು ತಿಳಿದುಕೊಂಡು ಇತರರಿಗೆ ಮಾರ್ಗದರ್ಶನ ಮಾಡಬೇಕು ಎಂದರು. ಉಡುಪಿಯ ಡಾ.ಆನಂದತೀರ್ಥ ರವರು ಮಧ್ವಾಚಾರ್ಯರ ತತ್ವದ ಕುರಿತು ತಿಳಿಸಿದರು

ಸಾಧಕರ ಸಮಾವೇಶದಲ್ಲಿ ಪುತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಮ್ಮ ಸಮಾಜದ ಮಕ್ಕಳಿಗೆ ತುಳುಶಿವಳ್ಳಿಯವರು ನಾವು ಎನ್ನುವ ಅಭಿಮಾನವನ್ನು ಬೆಳೆಸಿ ಹೆಮ್ಮೆಯಿಂದ ಹೇಳುವಂತೆ ಮಾಡಬೇಕು ಎಂದರು.