ಬಹು‌ ನಿರೀಕ್ಷಿತ ‘ಬೆಲ್ಚಪ್ಪ’ ತುಳು ಚಿತ್ರ ಅಗಸ್ಟ್ 9 ರಂದು ಬೆಳ್ಳಿ ತೆರೆಗೆ

ಉಡುಪಿ: ಜಯದುರ್ಗಾ ಪ್ರೊಡೆಕ್ಷನ್ ನಲ್ಲಿ ಮೂಡಿ ಬಂದ ಬೆಲ್ಚಪ್ಪ ತುಳು ಚಿತ್ರ ಆಗಸ್ಟ್ 9 ರಂದು ಉಡುಪಿ ಮತ್ತು ಮಂಗಳೂರಿನ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.
ಉಡುಪಿಯ ಕಲ್ಪನಾ ಚಿತ್ರಮಂದಿರ, ಕಾರ್ಕಳದ ಪ್ಲಾನೆಟ್ ಹಾಗೂ ಮಲ್ಟಿಪ್ಲೆಕ್ಸ್ ಮಂದಿರಗಳಾದ ಮಣಿಪಾಲದ ಅಯನಾಕ್ಸ್ ಹಾಗೂ ಭಾರತ್ ಸಿನಿಮಾಸ್ ನಲ್ಲಿ ಹಾಗೂ ಮಂಗಳೂರಿನ ಜ್ಯೋತಿ, ಮೂಡಬಿದಿರೆಯ ಅಮರಶ್ರೀ ಹಾಗೂ ಸಿನೆ ಪೋಲೀಸ್ ಮತ್ತು ಭಾರತ್ ಸಿನಿಮಾಸ್ ನಲ್ಲಿ ಬೆಲ್ಚಪ್ಪ ತೆರೆಕಾಣಲಿದ್ದಾನೆ ಉದ್ಯಮಿ ರತ್ನಾಕರ ಇಂದ್ರಾಳಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಲ್ಚಪ್ಪ ಚಿತ್ರಕ್ಕೆ ಕಥೆ- ಚಿತ್ರಕಥೆ-ಸಂಭಾಷಣೆ-ನಿರ್ದೇಶನವನ್ನು ರಜನೀಶ್ ದೇವಾಡಿಗ ಮಾಡಿದ್ದು, ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ತುಳುನಾಡಿನ ಮಾಣಿಕ್ಯ, ಹಾಸ್ಯ ಚಕ್ರವರ್ತಿ ಅರವಿಂದ ಬೋಳಾರ್ ಮುಖ್ಯ ಭೂಮಿಕೆ ನಟಿಸಿದ್ದು ಚಿತ್ರದ ಕೇಂದ್ರ ಬಿಂದುವಾಗಿದ್ದಾರೆ. ಇನ್ನು ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯ ಮುಖ್ಯ ಪಾತ್ರದಲ್ಲಿದ್ದಾರೆ.
ಹಾಸ್ಯಕಲಾವಿದರಾದ ಉಮೇಶ್ ಮಿಜಾರು, ದೀಪಕ್ ರೈ ಪಾಣಾಜೆ, ಪ್ರವೀಣ್ ಮರ್ಕಮೆ, ಯಜ್ಞೇಶ್, ಹಾಸ್ಯಕ್ಕೆ ಜೀವ ತುಂಬಿದ್ದಾರೆ. ಆಶಾ ಮಾರ್ನಾಡು, ಸುಭಾಶ್ ಶೆಟ್ಟಿ, ಸುಬ್ಬು ಮೂಡುಬಿದರೆ ಮೊದಲಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಂಗೀತ ನಿರ್ದೇಶನವನ್ನು ವಿಕ್ರಂ ಸೆಲ್ವ ಮಾಡಿದ್ದಾರೆ. ಇನ್ನು ಸಾಹಿತ್ಯ ಹಾಗೂ ರಾಗ‌ ಸಂಯೋಜನೆಯನ್ನು ಭರತ್ ಕುಮಾರ್ ಮಾಡಿದ್ದು, ತುಳು ಚಿತ್ರರಂಗದಲ್ಲೇ ಮೊದಲ ಬಾರಿಗೆ ಎಂ.ಕೆ.ವಿ.ಎ.ಆರ್ ಸ್ಟೆಡಿ ಸೈಕಲ್, ಸ್ಟೆಡಿ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಹಣವನ್ನು ಬಾಲಿವುಡ್ ಖ್ಯಾತಿಯ ಲಕ್ಷ್ಮೀಶ್ ಶೆಟ್ಟಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಾಹಸದಲ್ಲಿ ಕೌರವ ವೆಂಕಟೇಶ್ , ಸಂಕಲನದಲ್ಲಿ ಶ್ರೀಧರ್, ಸಹ ನಿರ್ದೇಶನದಲ್ಲಿ  ಸುಬ್ಬು ಮೂಡಬಿದರೆ, ಸಂತೋಷ್ ಶೆಟ್ಟಿ ಮಿಜಾರ್, ರಾಕೇಶ್ ದೇವಾಡಿಗ ಮತ್ತಿತರರು  ಕೆಲಸ ನಿರ್ವಹಿಸಿದ್ದಾರೆ.
ಟ್ರೈಲರ್ ಬಿಡುಗಡೆಯನ್ನು ಚಿತ್ರ ತಂಡ ಈಗಾಗಲೇ ಮಾಡಿದ್ದು, ತುಳುನಾಡಿನಾದ್ಯಂತ ಸಂಚಲನ ಮೂಡಿಸಿದೆ. ಕರಾವಳಿಯಲ್ಲಿ ‘ಬೆಲ್ಚಪ್ಪ’ಗೆ ಭಾರೀ ರೆಸ್ಪಾನ್ ವ್ಯಕ್ತವಾಗಿದೆ.  ಚಿತ್ರದ ಶೂಟಿಂಗ್ ನಿಂದ ಹಿಡಿದು ಪ್ರಮೋಷನ್ ತನಕ ಡಿಫರೆಂಟ್ ಆಗಿ ಬೆಲ್ಚಪ್ಪ ಮುಂದಡಿ ಇಟ್ಟಿದ್ದಾನೆ.
ಕೋಸ್ಟಲ್ ವುಡ್ ನಲ್ಲೇ  14 ದಿನದಲ್ಲಿ ಹಾಡು ಸಹಿತ ಚಿತ್ರ‍ಿಕರಣ ಮುಗಿಸಿದ ದಾಖಲೆಯನ್ನ ಬೆಲ್ಚಪ್ಪ ಚಿತ್ರ ತಂಡ ಮಾಡಿದೆ. ಚಿತ್ರದ ಟ್ರೈಲರ್ ನ್ನು ಕೊಡ್ಯಡ್ಕ‌ ಅನ್ನಪೂರ್ಣೇಶ್ವರಿ ದೇವಸ್ಥಾನದ ಆನೆ ಲಕ್ಷ್ಮೀಯ ಆಶೀರ್ವಾದದಿಂದ ನಡೆದಿದ್ದು , ಟ್ರೈಲರನ್ನು ಯು ಟ್ಯೂಬ್ ನಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬೆಲ್ಚಪ್ಪ ಚಿತ್ರ ಉಡುಪಿಯ ಆಸುಪಾಸಿನಲ್ಲೇ ಚಿತ್ರೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು‌.
ಗೋಷ್ಠಿಯಲ್ಲಿ ಭರತ್ ಕುಮಾರ್, ಪಲ್ಲವಿ ಸಂತೋಷ್, ಸಂತೋಷ್ ಶೆಟ್ಟಿ ಮಿಜಾರ್,
ಮನೀಷ್ ಉಪಸ್ಥಿತರಿದ್ದರು.