ತುಳು ಭಾಷೆಗೆ ಅಧಿಕೃತ ಭಾಷೆ ಮಾನ್ಯತೆ ದೊರೆತಿಲ್ಲ: ಈ‌ ಬಗ್ಗೆ ಸರಕಾರ ಕಣ್ಣು ತೆರೆಯಬೇಕು: ಕತ್ತಲ್‌ಸಾರ್‌

ಉಡುಪಿ: ಅತ್ಯಂತ ಸಮೃದ್ಧ ಹಾಗೂ ಸುಂದರ ಭಾಷೆ ಆಗಿರುವ ತುಳುವಿಗೆ ಈವರೆಗೂ ಅಧಿಕೃತ‌ ರಾಜ್ಯ ಭಾಷೆ ಮಾನ್ಯತೆ ಸಿಕ್ಕಿಲ್ಲ. ಇದರಿಂದ ತುಳುವನ್ನು ಸಂವಿಧಾನದ 8 ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನಾದರೂ ಕಣ್ಣುತೆರೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಎಂಜಿಎಂ ಕಾಲೇಜಿನ ತುಳು ಸಂಘ ಹಾಗೂ ತುಳುಕೂಟ ಉಡುಪಿ ಇದರ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತುಳು ಸಂಸ್ಕೃತಿಯ ಹಬ್ಬ ‘ತುಳು ಐಸಿರಿ–2020’ ಅನ್ನು ಉದ್ಘಾಟಿಸಿ ಮಾತನಾಡಿದರು.
ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಜ್ಯ ಭಾಷೆಗಳನ್ನು ಹೊಂದಿವೆ. ತುಳುಭಾಷೆ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನದಾಗಿದ್ದು, ಶಿಲಾಶಾಸನ, ತಾಮ್ರ ಶಾಸನಗಳನ್ನು ಒಳಗೊಂಡಿದೆ. ಅಲ್ಲದೆ, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಸ್ವಾತಂತ್ರ್ಯ ಭಾಷೆಯಾಗಿದೆ. ಆದರೂ ರಾಜ್ಯ ಭಾಷೆಯ ಮಾನ್ಯತೆ ಸಿಗದಿರುವುದು ಬೇಸರ ಸಂಗತಿ ಎಂದರು.
ಜಗತ್ತಿನ ವ್ಯವಹಾರಿಕ ಭಾಷೆಯಾಗಿರುವ ಇಂಗ್ಲಿಷ್‌, ಕನ್ನಡಿಗರ ಮಾತೃಭಾಷೆಯಾಗಿರುವ ಕನ್ನಡ ಹಾಗೂ ದೇವಾ ಭಾಷೆಯಾಗಿರುವ ಸಂಸ್ಕೃತಕ್ಕೆ ಸ್ವಂತ ಲಿಪಿಯಿಲ್ಲ. ಸಂಸ್ಕೃತ ಭಾಷೆಗೆ ಲಿಪಿಕೊಟ್ಟ ಹೆಗ್ಗಳಿಕೆ ತುಳುವಿಗಿದೆ. ಅದೇ ರೀತಿ ಮಳಯಾಲಂ ಭಾಷೆಗೆ ತುಳು ಲಿಪಿಯನ್ನು ಬಳಸಲಾಗುತ್ತಿದೆ. ಇದು ತುಳುಭಾಷೆಗೆ ಇರುವ ಶಕ್ತಿ ಎಂದು ಅಭಿಪ್ರಾಯಪಟ್ಟರು.
ತುಳು ಅಕಾಡೆಮಿ ಈ ವರ್ಷ ರಜತ ಮಹೋತ್ಸವ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತುಳು ವಿಶ್ವ ಸಮ್ಮೇಳನ ಪ್ರಮುಖವಾಗಿದೆ. ಹಾಗೆಯೇ ಅರ್ಧಕ್ಕೆ ನಿಂತಿರುವ ತುಳು ಭವನದ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ 3.5 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಅಧ್ಯಕ್ಷತೆ ವಹಿಸಿದ್ದರು.
ತುಳುಕೂಟದ ಜಯಕರ ಶೆಟ್ಟಿ ಇಂದ್ರಾಳಿ, ತುಳು ಚಿತ್ರನಟರಾದ ಮಂಜು ರೈ, ಮರ್ವಿನ್‌ ಶಿರ್ವ, ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷೆ ತನುಜಾ ಮಾಬೆನ್‌, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್‌ ಪೂಜಾರಿ, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ತುಳು ಸಂಘದ ಕಾರ್ಯದರ್ಶಿ ವೀಕ್ಷಿತ್‌ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನ ಮಾಡಲಾಯಿತು. ತುಳು ಸಂಘದ ಸಂಚಾಲಕ ಡಾ. ಪುತ್ತಿ ವಸಂತ ಕುಮಾರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.
ಜನಗಣತಿ: ತುಳುವಿಗೆ ಆದ್ಯತೆ ನೀಡಿ:
ಜಿಲ್ಲಾಡಳಿತ ತುಳುನಾಡನ್ನು ಕರಾವಳಿ ಕರ್ನಾಟಕವನ್ನಾಗಿ ಪ್ರತ್ಯೇಕಿಸಿ ಕರಾವಳಿ ಕರ್ನಾಟಕ ಉತ್ಸವ ಮಾಡುತ್ತಿದೆ. ಆದರೆ ತುಳುನಾಡು ಉತ್ಸವ ಮಾಡದಿರುವುದು ದುರಂತ. ಈ ವರ್ಷದಿಂದ ಆರಂಭಗೊಳ್ಳುವ ಜನಗಣತಿಯಲ್ಲಿ ತುಳುವರು ತಮ್ಮ ಮಾತೃಭಾಷೆ ತುಳು ಎಂದು ನಮೂದಿಸಬೇಕು. ಆ ಮೂಲಕ ತುಳು ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ದಯಾನಂದ ಜಿ. ಕತ್ತಲ್‌ಸಾರ್‌ ಹೇಳಿದರು.